KITTUR : ಕಿತ್ತೂರು ಪಟ್ಟಣ ಅಭಿವೃದ್ಧಿಗೆ ನೂರು ಕೋಟಿ ಬಿಡುಗಡೆ; ಬೊಮ್ಮಾಯಿ

varthajala
0

 ಕಿತ್ತೂರು ಕೋಟೆ ಪುನರ್ ನಿರ್ಮಾಣಕ್ಕೆ ಕ್ರಮ; ಕಿತ್ತೂರು ಪಟ್ಟಣ ಅಭಿವೃದ್ಧಿಗೆ ನೂರು ಕೋಟಿ ಬಿಡುಗಡೆ; ಮೆಗಾ ನಾಟಕಕ್ಕೆ ಎರಡುಪಟ್ಟು ಅನುದಾನದ ಮೂಲಕ ಪ್ರೋತ್ಸಾಹ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಧಾರವಾಡ (ಕ.ವಾ) ಡಿ.24: ಕಿತ್ತೂರು ನಾಡಿನ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ದವಾಗಿದ್ದು, ಕಿತ್ತೂರು ಕೋಟೆಯ ಪುನರ್ ನಿರ್ಮಾಣ, ದಾಖಲೆ ಸಂರಕ್ಷಣೆಗೆ ಸರಕಾರ ಅಗತ್ಯ ಕ್ರಮವಹುಸಿದೆ. ಧಾರವಾಡ ರಂಗಾಯಣ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕದ ಮೂಲಕ ಇತಿಹಾಸವನ್ನು ಮರು ಸೃಷ್ಟಿಸಿ,  ಅಭಿಮಾನ ಮೂಡಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಕೆಸಿಡಿ ಆವರಣದಲ್ಲಿ ಧಾರವಾಡ ರಂಗಾಯಣ ಹಾಗೂ ಜಿಲ್ಲಾಡಳಿತ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕವನ್ನು ಉದ್ಘಾಟಿಸಿ, ಮಾತನಾಡಿದರು.

ವೀರರಾಣಿ ಕಿತ್ತೂರು ಚನ್ನಮ್ಮಳನ್ನು ನೆನೆಸಿದರೆ ರೋಮಾಂಚನವಾಗುತ್ತದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ ಮೊದಲು  ಸ್ವಾತಂತ್ರ್ಯದ ಕಹಳೆ ಮೊಳಗಿಸಿ, ಬ್ರಿಟಿಷರ ವಿರುದ್ದ ಹೊರಾಡಿದಳು. ಸಣ್ಣ ಸೈನ್ಯ ಕಟ್ಟಿಕೊಂಡು ಕೆಚ್ಚೆದೆಯಿಂದ ಪರಕೀಯರ ವಿರುದ್ಧ ಯುದ್ದ ಸಾರಿದ್ದಳು. ಇಂತಹ ನಾಟಕವನ್ನು ಪರವಿನಾಯ್ಕರ್  ಅವರು ಶ್ರದ್ದೆಯಿಂದ  ರೂಪಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ರಮೇಶ ಪರವಿನಾಯ್ಕರ ಅವರ ಬೆನ್ನುತಟ್ಟಿ ಮೆಚ್ಚುಗೆ ಸೂಚಿಸಿದರು. 


ಕಿತ್ತೂರು ಕೋಟೆ ಪೂರ್ಣ ನಿರ್ಮಾಣ ಮಾಡಲು ಸರಕಾರ ತೀರ್ಮಾನಿಸಿ ಕ್ರಮಕೈಗೊಂಡಿದೆ. ಕಿತ್ತೂರು ಅಭಿವೃದ್ಧಿಗೆ ರೂ.100 ಕೋಟಿ ಖರ್ಚು ಮಾಡಲಾಗುತ್ತಿದೆ. ವೀರರಾಣಿ ಕಿತ್ತೂರು ಚನ್ನಮ್ಮ ಮೆಗಾ ನಾಟಕಕ್ಕೆ ಈಗ ಸರಕಾರ ನೀಡಿರುವ ಅನುದಾನವನ್ನು ದ್ವಿಗುಣಗೊಳಿಸಿ, ಎರಡುಪಟ್ಟು ಅನುದಾನ ನೀಡಲು ನಿರ್ಧಿರಿಸಲಾಗಿದೆ. ಈ ಮೂಲಕ ಮೆಗಾ ನಾಟಕ ಪ್ರದರ್ಶನವನ್ನು ಪ್ರೋತ್ಸಾಹಿಸಲಾಗುವುದು ಎಂದು ಮುಖ್ಯಮಂತ್ತಿಗಳು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಅವರು ಮಾತನಾಡಿ, ಮರಾಠಿಯಲ್ಲಿ ಪ್ರದರ್ಶನವಾದ ಜನತಾರಾಜಾ ನಾಟಕದ ಮೂಲಕ ಶಿವಾಜಿ ಮಹಾರಾಜರ ಸಾಹಸಗಾಥೆಯನ್ನು ತೆರೆಗೆ ತರಲಾಗಿತ್ತು. ಅದಕ್ಕೆ ಪೂರಕವಾಗಿ ಕನ್ನಡ ನಾಡಿನ ಹೆಮ್ಮೆಯ ನಾಯಕಿ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮನ ಕುರಿತು ಮೆಗಾ ನಾಟಕ ಧಾರವಾಡ ರಂಗಾಯಣಿಂದ ರೂಪುಗೊಂಡಿದೆ ಎಂದರು.

ಧಾರವಾಡ ರಂಗಾಯಣದಿಂದ  ಈ ನಾಟಕವನ್ನು ರಾಜ್ಯದಾದ್ಯಂತ ಪ್ರದರ್ಶನ ಆಯೋಜಿಸಿ, ವೀರರಾಣಿ ಕಿತ್ತೂರು ಚನ್ನಮ್ಮಳ ಇತಿಹಾಸವನ್ಬು ಪಸರಿಸುವಂತೆ ಅವರು ತಿಳಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು  ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿ, ನಾಟಕದ ತಯ್ಯಾರಿ, ಶ್ರಮ ಮತ್ತು ನಿರ್ದೇಶಕ ರಮೇಶ ಅವರ ಸಾಹಸ ಸ್ಮರಿಸಿ, ಪ್ರೋತ್ಸಾಹಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಅರುಣ ಜೋಶಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ರಮೇಶ ಪರವಿನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರು, ಧಾರವಾಡ ರಂಗಾಯಣ ನಿರ್ದೇಶಕ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕದ ಪ್ರಧಾನ ನಿರ್ದೇಶಕ ರಮೇಶ ಪರವಿನಾಯ್ಕರ ಅವರಿಗೆ  ರಂಗ ಜ್ಯೋತಿ ಅಭಿದಾನ ನೀಡಿ, ಸನ್ಮಾನಿಸಿ, ಗೌರವಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದಗ-ಡಂಬಳ ತೋಂಟದಾರ್ಯ ಮಠದ ಡಾ.  ಸಿದ್ದರಾಮ ಮಹಾಸ್ವಾಮಿಗಳು, ಹುಕ್ಜೆರಿ ಹಿರೇಮಠದ ಷ.ಬ್ರ. ಚಂದ್ರಶೇಖರ ಶಿವಾಚಾರ್ಯರ ಮಹಾಸ್ವಾಮಿಗಳು,  ಕಿತ್ತೂರು ಚನ್ನಮ್ಮ ರಾಜಗುರು ಸಂಸ್ಥಾನ ಕಲ್ಲಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿದ್ದರು.

 ಧಾರವಾಡ ಶಾಸಕ ಅಮೃತ ದೇಸಾಯಿ, ಸೆಡಂ ಶಾಸಕ ರಾಜಕುಮಾರ ಪಾಟೀಲ, ಮಹಾಪೌರ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕವಿವಿ ಕುಲಪತಿ ಡಾ. ಕೆ.ಬಿ.ಗುಡಸಿ, ಕುಲಸಚಿವ ಯಶಪಾಲ್, ಆರ್ ಎಸ್.ಎಸ್.ಪ್ರಮುಖರಾದ ಅರವಿಂದರಾವ್ ದೇಶಪಾಂಡೆ ಕ್ಷೀರಸಾಗರ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವಣಪ್ಪ ಅಷ್ಟಗಿ , ರಂಗಾಯಣ ಆಡಾಳಿತಾಧಿಕಾರಿ ಶಶಿಕಲಾ ಹುಡೆದ  ಸೇರಿದಂತೆ ವಿವಿಧ ನಿಗಮ, ಮಂಡಳಿ ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು, ಇತರರು ವೇದಿಕೆಯಲ್ಲಿ ಇದ್ದರು. 

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಖು, ಕಲಾವಿಧರಿ, ಸಂಶೋಧಕರಿ, ವಿದ್ವಾಂಸರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Post a Comment

0Comments

Post a Comment (0)