ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಉದ್ಯಮ ಕೌಶಲ್ಯಗಳನ್ನು ಬೆಳೆಸುವುದು ಅತ್ಯಗತ್ಯʼ

varthajala
0
ಬೆಂಗಳೂರು: ಇಂದಿನ ಮಕ್ಕಳಿಗೆ ಅನ್ವೇಷಣೆ,  ಅಭಿವೃದ್ಧಿ ಮತ್ತು ಉದ್ದಿಮೆದಾರರಾಗುವಲ್ಲಿ ಮಾರ್ಗದರ್ಶನ ಅತ್ಯಗತ್ಯ. ಈ ನಿಟ್ಟಿನಲ್ಲಿ ಕೈಜೆನ್‌ ತಂತ್ರಗಳು ಸದ್ಭಳಕೆಯಾಗಲಿವೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಹಾಗೂ ಇನ್ನೋವೇಶನ್‌ ಹೆಡ್ ಮಂಜುನಾಥ್ ಹೆಚ್.ಎಸ್ ಹೇಳಿದರು. 

ಶಿಕ್ಷಣ ಸಚಿವಾಲಯದ ಸಹಯೋಗದೊಂದಿಗೆ ಇಂದು ಬೆಂಗಳೂರಿನ ಎಎಂಸಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಯುವಕರಲ್ಲಿ  ಕ್ರಿಯಾಶೀಲಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಎರಡು ದಿನಗಳ ಬೂಟ್‌ ಕ್ಯಾಂಪ್‌ ಅನ್ನು ಆಯೋಜಿಸಲಾಗಿತ್ತು. ಎರಡು ದಿನಗಳ ಈ ಶಿಬಿರದ ಉದ್ಘಾಟನೆ ಬಳಿಕ ಮಾತನಾಡಿದ ಮಂಜುನಾಥ್ ಅವರು, ವಿದ್ಯಾರ್ಥಿಗಳು ಕೈಜೆನ್‌ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಕೈಜೆನ್‌ ತಂತ್ರಗಳೆಂದರೆ ಮನುಷ್ಯ ತನ್ನ ಶಕ್ತಿ ಮೀರಿ ಕೆಲಸ ಮಾಡುವುದಕ್ಕೆ ಮುಂದಾಗುವುದು. ಹಾಗಾದಾಗ ಮಾತ್ರ ಉತ್ತಮ ಫಲಿತಾಂಶ ಸಿಕ್ಕೇ ಸಿಗಲಿದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯನಿರತರಾದಲ್ಲಿ ಮಾತ್ರ ಯಶಸ್ಸು ಸಿಗಲು ಸಾಧ್ಯವೆಂದು ಹೇಳಿದರು. 



ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವಾಲಯದ ಆವಿಷ್ಕಾರ ವಿಭಾಗದ ಸಹ ನಿರ್ದೇಶಕ ಪ್ರದೀಪ್‌ ಧಾಗೆ ಮಾತನಾಡಿ, ಈ ಶಿಬಿರವು ಆರಂಭಿಕ ಹಂತದಲ್ಲಿ ಒಂಬತ್ತು ಪ್ರಮುಖ ನಗರಗಳಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ 15 ನಗರಗಳಿಗೆ ವಿಸ್ತರಿಸಲಿದ್ದು, ಸುಮಾರು 40 ಕೋಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅನೇಕ ಖಾಸಗಿ ಸಂಸ್ಥೆಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದು, ಕಾರ್ಯಕ್ರಮದ ಯಶಸ್ಸಿಗೆ ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕು ಎಂದು ಒತ್ತಿ ಹೇಳಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುಮಾರ್ ಕೆ, ಇಂದಿನ ಮಕ್ಕಳ ಬದುಕಿಗೆ ಉತ್ತಮ ಮಾರ್ಗದರ್ಶನ ಬೇಕಿದೆ. ಈ ಮೂಲಕ ಅವರಲ್ಲಿ ಸೃಜನಶೀಲತೆ ಮತ್ತು ಹೊಸತನವನ್ನು ಅಭಿವೃದ್ಧಿಪಡಿಸುವುದು ಮುಖ್ಯ. ಏಕೆಂದರೆ ಅನೇಕ ಮಕ್ಕಳು ಉದ್ಯಮಿಗಳಾಗುವ ಆಲೋಚನೆಯನ್ನು ಹೊಂದಿರುತ್ತಾರೆ. ಆದರೆ ಅವರ ಆಲೋಚನೆಗಳಿಗೆ ತಕ್ಕಂತೆ ನಿರ್ದಿಷ್ಟ ತರಬೇತಿ ಅತ್ಯಗತ್ಯ. ತಂತ್ರಜ್ಞಾನವು ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ, ಅದನ್ನು ನಾವು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ಪ್ರಯತ್ನವು ಶಾಲಾ ಹಂತದಲ್ಲಿಯೇ ನಿರ್ಮಾಣವಾಗಬೇಕು ಎಂದು ತಿಳಿಸಿದರು.



ಹಿಂದಿನ ದಿನಗಳಲ್ಲಿ ನಮಗೆ ಶಿಕ್ಷಣದ ಬಗ್ಗೆ ಸರಿಯಾದ ಮಾರ್ಗದರ್ಶನವಿರಲಿಲ್ಲ. ಆದರೆ ಈಗಿನ ಮಕ್ಕಳು ಈ ಬಗ್ಗೆ ಹೆಚ್ಚು ತಿಳಿಯುವಂತಾಗಬೇಕು, ಹಾಗಾದಾಗ ವಿದ್ಯಾರ್ಥಿಗಳು ಬದುಕಿನ ಬಗ್ಗೆ ಕನಸುಗಳನ್ನು ಕಾಣಲು ಸಾಧ್ಯ. ಅದಕ್ಕೆ ತಕ್ಕಂತೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ದಾರಿಗಳು ತೆರೆದುಕೊಳ್ಳುತ್ತವೆ. ಹೀಗಾದಾಗ ಮಾತ್ರ  ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉದ್ದಿಮೆದಾರರಾಗಲು ಅನೇಕ ಅವಕಾಶಗಳು ದೊರೆಯಲಿವೆ. ಈ ಶಿಬಿರವು ವಿದ್ಯಾರ್ಥಿಗಳ ಜೀವನವನ್ನು ಧನಾತ್ಮಕವಾಗಿ ಪರಿವರ್ತಿಸುವ ನಮ್ಮ ಆರಂಭಿಕ ಪ್ರಯತ್ನವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರವು  ವಿದ್ಯಾರ್ಥಿಗಳ ಒಳಿತಿಗಾಗಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಲೋಚನೆ ಹೊಂದಿದೆ. ಈ ನಿಟ್ಟಿನಲ್ಲಿ ಖಾಸಗಿ ಕಾಲೇಜುಗಳು ಕಾರ್ಯಪ್ರವೃತ್ತರಾಗಬೇಕು ಎಂದು ಡಾ. ಕುಮಾರ್ ಅವರು ಶಿಕ್ಷಣ ಮಾದರಿಗಳ ಬದಲಾವಣೆಗಳ ಬಗ್ಗೆ ಮಾತನಾಡುವಾಗ ವಿವರಿಸಿದರು. 



ಈ ವೇಳೆ ವಿದೇಶಿ ಸಂಸ್ಥೆಗಳ ಸಹಯೋಗದೊಂದಿಗೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಎಎಂಸಿ ಸಂಸ್ಥೆಯಲ್ಲಿ ಎಂಬಿಎ ಕೋರ್ಸ್‌ ಸ್ಥಾಪನೆಗೆ ಕಾರಣಕರ್ತರಾದ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಆರ್.‌ ಪರಮಹಂಸ ಅವರ ಸಾಧನೆಯನ್ನು ಅವರು ನೆನೆದರು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ ಎಎಂಸಿ ಸಂಸ್ಥೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ರಾಹುಲ್ ಕಲ್ಲೂರಿ ಅವರ ಪಾತ್ರವನ್ನು ಅವರು ಶ್ಲಾಘಿಸಿದರು. 
 
ಕಾರ್ಯಕ್ರಮದಲ್ಲಿ ಎಎಂಸಿ ಸಂಸ್ಥೆಯ ಅಧ್ಯಕ್ಷ  ಡಾ. ಕೆ.ಆರ್.‌ ಪರಮಹಂಸ, ಶ್ರೀ ರಾಹುಲ್ ಕಲ್ಲೂರಿ (ಎಎಂಸಿ ಸಂಸ್ಥೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರು), ಡಾ ಮೋಹನ್ ಬಾಬು ಜಿಎನ್ (ನಿರ್ದೇಶಕರು, ಎಎಂಸಿ ಇಂಜಿನಿಯರಿಂಗ್ ಕಾಲೇಜು), ಸಿಬ್ಬಂದಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6364409651, 6364466240
Tags

Post a Comment

0Comments

Post a Comment (0)