ಬೆಂಗಳೂರು ಅಕ್ಟೋಬರ್ 24 (ಕರ್ನಾಟಕ ವಾರ್ತೆ): ದೇಶದಾದ್ಯಂತ ಕೇಂದ್ರ ಸರ್ಕಾರದ ಉದ್ಯೋಗ ಮೇಳದಲ್ಲಿ ಆಯ್ಕೆಯಾದ 51 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ಇಂದು ವಿತರಣೆ ಮಾಡಲಾಯಿತು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ ತಿಳಿಸಿದರು.
ಭಾರತೀಯ ಅಂಚೆ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳ ಸಹಭಾಗಿತ್ವದೊಂದಿಗೆ ಎನ್ಜಿಓ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳ ನೇಮಕಾತಿ ಅಭಿಯಾನದ ರಾಷ್ಟ್ರೀಯ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ 17ನೇ ಉದ್ಯೋಗ ಮೇಳವು ದೇಶದ 40 ಕಡೆಗಳಲ್ಲಿ ಇಂದು ಏಕ ಕಾಲದಲ್ಲಿ ನಡೆಯುತ್ತಿದೆ ಎಂದರು.
ನಮ್ಮ ರಾಜ್ಯದಲ್ಲಿ ಈ ಮೇಳವು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು, ಇಂದು ಬೆಂಗಳೂರಿನಲ್ಲಿ 120 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಹೊಸದಾಗಿ ನೇಮಕವಾದ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಇಲಾಖೆ, ರೈಲ್ವೆ ಇಲಾಖೆ, ಗೃಹ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ಹಣಕಾಸು ಸೇವೆಗಳ ಇಲಾಖೆ, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು, ವಿವಿಧÀ ಸಂಸ್ಥೆಗಳ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ ಎಂದರು.
ಭಾರತದ ಯುವಕರು ತಂತ್ರಜ್ಞಾನ, ಶಿಕ್ಷಣ, ಕೌಶಲ್ಯ, ರಕ್ಷಣೆ, ಕೌಶಲ್ಯಾಭಿವೃದ್ಧಿ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸಾಮಥ್ರ್ಯವನ್ನು ಜಗತ್ತಿಗೆ ತೋರಿಸಿದ್ದಾರೆ. ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಯುವಕರ ಪಾತ್ರವನ್ನು ಗುರುತಿಸಿ ಪ್ರಧಾನಮಂತ್ರಿಗಳು ಅಕ್ಟೋಬರ್ 2022 ರಂದು ರೋಜ್ಗಾರ್ ಮೇಳವನ್ನು ಪ್ರಾರಂಭಿಸಿದರು. ಈ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಮೂಲಕ ಯುವಕರ ಸಬಲೀಕರಣ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಭಾಗವಹಿಸುವ ಅವಕಾಶವನ್ನು ಒದಗಿಸಲಿದೆ ಎಂದರು.
ಹೊಸದಾಗಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಪೋಷಕರು ಕಷ್ಟಪಟ್ಟು ವಿದ್ಯಾಭ್ಯಾಸ ಕೊಡಿಸಿದ್ದಾರೆ. ಪೋಷಕರ ಶ್ರಮದ ಜೊತೆ ನೀವು ಶಿಕ್ಷಣ ಪಡೆದು, ಇಂದು ಉದ್ಯೋಗ ಪಡೆದಿದ್ದೀರಿ. ನಮ್ಮ ದೇಶದ ಸಲುವಾಗಿ ಕೆಲಸ ಮಾಡಬೇಕು. ನಿಮಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶದ ಮೂಲಕ ನೇಮಕಾತಿ ಪಡೆದ ಅಭ್ಯರ್ಥಿಗಳಿಗೆ ಶುಭಾಷಯ ಕೋರಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್, ಮುಖ್ಯ ಅಂಚೆ ಇಲಾಖೆಯ ನಿರ್ದೇಶಕರಾದ ಸಂದೇಶ ಮಹದೇವಪ್ಪ, ರೈಲ್ವೆ ಇಲಾಖೆಯ ಅಧಿಕಾರಿ ಶ್ರೀಮತಿ ಉಮಾ ಶರ್ಮಾ, ಗೃಹ ಮಂತ್ರಾಲಯದ ಕಮಾಂಡೆಂಟ್ ಅನಿಲ್ ಕುಮಾರ್ ಮೀನಾ, ಅಂಚೆ ಇಲಾಖೆಯ ಅಧಿಕಾರಿಗಳು, ಹೊಸದಾಗಿ ನೇಮಕಾತಿ ಪಡೆದ ಅಭ್ಯರ್ಥಿಗಳು ಉಪಸ್ಥಿತರಿದ್ದರು.