ಬೆಂಗಳೂರು, ಮೇ 27, (ಕರ್ನಾಟಕ ವಾರ್ತೆ) : ಕಾವೇರಿ ನೀರಾವರಿ ನಿಗಮ ನಿಯಮಿತದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ 2025 ಮೇ 13 ರಂದು ನಡೆದ ಹೇಮಾವತಿ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಹೇಮಾವತಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಕೆರೆ-ಕಟ್ಟೆಗಳಿಗೆ ಕುಡಿಯುವ ನೀರಿನ ಬೇಡಿಕೆ/ಅವಶ್ಯಕತೆಗೆ ಅನುಗುಣವಾಗಿ, ನಿಗಧಿತ ಪ್ರಮಾಣದಲ್ಲಿ ನಿಯಮಿತವಾಗಿ ಹೇಮಾವತಿ ಜಲಾಶಯದ ಎಡದಂಡೆ ನಾಲೆಗಳ ಮೂಲಕ ನೀರನ್ನು 2025 ನೇ ಮೇ 23 ರಿಂದ ಜೂನ್ 4 ರವರೆಗೆ ಹರಿಸಲಾಗುವುದು ಎಂದು ಚನ್ನರಾಯಪಟ್ಟಣ ಹೇಮಾವತಿ ನಾಲಾ ವೃತ್ತದ ಸೂಪರಿಂಟೆಂಡಿಂಗ್ ಇಂಜಿನಿಯರ್ ತಿಳಿಸಿದ್ದಾರೆ.
ನಾಲೆಗಳಲ್ಲಿ ನೀರನ್ನು ಹರಿಸುವ ಅವಧಿಯು ತಾತ್ಕಾಲಿಕವಾಗಿದ್ದು, ಹೇಮಾವತಿ ಜಲಾನಯನ ಹಾಗೂ ಯೋಜನಾ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಪೂರ್ವ ಮುಂಗಾರು ಮಳೆಯ ಸ್ಥಿತಿಗತಿಗಳನ್ನು ಅವಲೋಕಿಸಿ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆ-ಕಟ್ಟೆಗಳಿಗೆ ಕಾಲುವೆಗಳ ಮೂಲಕ ನೀರನ್ನು ಹರಿಸಲು/ನಿಲ್ಲಿಸಲು ಅಗತ್ಯ ಕ್ರಮವಹಿಸಲಾಗುವುದು.
ಈ ಸಂಬಂಧ ಕುಡಿಯುವ ನೀರಿಗಾಗಿ ಮೀಸಲಿಟ್ಟಿರಿರುವ ಪ್ರಮಾಣದಷ್ಟು ನೀರನ್ನು ಹೇಮಾವತಿ ಜಲಾಶಯದಿಂದ ನಾಲೆ ಮೂಲಕ ಹರಿಸಲಾಗುವುದು. ಪ್ರಸ್ತುತ ನೀರಿನ ಅಭಾವವಿದ್ದು, ಈ ನೀರನ್ನು ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ಯಾವುದೇ ಕೃಷಿ ಚಟುವಟಿಕೆಗಳಿಗೆ ಬಳಸತಕ್ಕದ್ದಲ್ಲ. ಈ ಸಂದರ್ಭದಲ್ಲಿ ಯೋಜನಾ ವ್ಯಾಪ್ತಿಯಲ್ಲಿನ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ನೀರು ಪೆÇೀಲಾಗದಂತೆ ಎಲ್ಲಾ ತುರ್ತು ಕ್ರಮ ತೆಗೆದುಕೊಂಡು, ಹೇಮಾವತಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಹಾಗೂ ರೈತರಿಗೆ ಸೂಕ್ತ ತಿಳುವಳಿಕೆ ನೀಡಿ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು. ಈ ಬಗ್ಗೆ ಯೋಜನಾ ವ್ಯಾಪ್ತಿಯಲ್ಲಿನ ಎಲ್ಲಾ ಸಾರ್ವಜನಿಕರು ಮತ್ತು ಅಚ್ಚುಕಟ್ಟುದಾರರು ಸುಗಮ ನೀರು ನಿರ್ವಹಣೆ ನಡೆಸುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.