72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸೋಣ- ಜಿ.ಟಿ.ದೇವೇಗೌಡ

varthajala
0

 ಬೆಂಗಳೂರು, ನವೆಂಬರ್ 13 (ಕರ್ನಾಟಕ ವಾರ್ತೆ): ಸಹಕಾರ ಕ್ಷೇತ್ರದ ಬೆಳವಣಿಗೆ ಪ್ರತಿ ವರ್ಷ ನವೆಂಬರ್ 14 ರಿಂದ 20 ರವರೆಗೆ ಅಖಿಲ ಭಾರತ ಸಹಕಾರಿ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದ್ದು ಪ್ರತಿಯೊಬ್ಬರು ಈ ಸಪ್ತಾಹವನ್ನು ಹಬ್ಬದಂತೆ ಆಚರಿಸೋಣ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಸಹಕಾರಿ ಮಹಾಮಂಡಳ ಅಧ್ಯಕ್ಷರಾದ ಜಿ.ಟಿ. ದೇವೇಗೌಡ ಅವರು ಕರೆ ನೀಡಿದರು.


ಇಂದು ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತದ ಸಭಾಂಗಣದಲ್ಲಿ 2025ನೇ ನವೆಂಬರ್ 14 ರಂದು ಹಮ್ಮಿಕೊಳ್ಳಲಾಗಿರುವ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಆಚರಣೆ ಕುರಿತ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಹಕಾರ ಸಪ್ತಹವನ್ನು ರಾಜ್ಯಮಟ್ಟದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಂಡಳಿ, ಅಪೆಕ್ಸ್ ಸಹಕಾರಿ ಸಂಸ್ಥೆ ಮತ್ತು ಸಹಕಾರಿ ಇಲಾಖೆ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಎಲ್ಲಾ ಸಹಕಾರ ಸಂಘಗಳ ಸಹಯೋಗದೊಂದಿಗೆ ನಡೆಯಲಿದೆ.

ಈ ಬಾರಿ 72ನೇ ಅಖಿಲ ಸಹಕಾರಿ ಸಪ್ತಾಹ ರಾಜ್ಯಾದ್ಯಂತ ಏಳು ದಿನಗಳು ಕಾಲ ವಿವಿಧ ವಿಷಯಗಳ ಧ್ಯೇಯದೊಂದಿಗೆ ನಡೆಯಲಿದೆ, ನವೆಂಬರ್ 14 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯದಕ್ಷತೆ, ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಡಿಜಿಟಲೀಕರಣವನ್ನು ಪ್ರೋತ್ಸಾಹಿಸುವುದು ಧ್ಯೇಯದೊಂದಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸಹಕಾರ ಚಳವಳಿಯಲ್ಲಿ ಮುಖಂಡತ್ವ ವಹಿಸಿದ್ದ ದಿವಂಗತ ಬಿ.ಎಸ್. ವಿಶ್ವನಾಥ್ ಅವರ ಕಂಚಿನ ಪುತ್ಥಳಿಯನ್ನು ಸಹಕಾರ ಮಹಾಮಂಡಳದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಲಿದ್ದಾರೆ ಎಂದು ಹೇಳಿದರು.

ನವೆಂಬರ್ 15ರಂದು ರಾಯಚೂರಿನಲ್ಲಿ ತ್ರಿಭುವನ್ ಸಹಕಾರ ವಿಶ್ವವಿದ್ಯಾಲಯ: ಸಂಶೋಧನೆ ಮತ್ತು ತರಬೇತಿಯಿಂದ ಸಹಕಾರ ಶಿಕ್ಷಣದಲ್ಲಿ ಪರಿವರ್ತನೆ, ನವೆಂಬರ್ 16 ರಂದು ಮಂಗಳೂರಿನಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ, ನವೆಂಬರ್ 17 ರಂದು ಹೊಸಪೇಟೆಯಲ್ಲಿ ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ, ನವೆಂಬರ್ 18 ರಂದು ಹಾವೇರಿಯಲ್ಲಿ ಸಹಕಾರಿ ಉದ್ಯಮಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ (ಕರಕುಶಲ, ಕೈಮಗ್ಗ, ಕಾರ್ಮಿಕ, ಮೀನುಗಾರಿಕೆ), ನವೆಂಬರ್ 19 ರಂದು ಕೊಪ್ಪಳದಲ್ಲಿ ಪ್ರವಾಸೋದ್ಯಮ, ಆರೋಗ್ಯ, ಹಸಿರು ಇಂಧನ, ಪ್ಲಾಟ್ ಫಾರಂ, ಸಹಕಾರಿ ಸಂಸ್ಥೆಗಳು, ಕಿಚನ್ ಸಹಕಾರ ಸಂಘಗಳು ಮತ್ತಿತರ ಉದಯೋನ್ಮುಖ ಸಹಕಾರ ಸಂಘಗಳನ್ನು ಅನುಕೂಲಕರ ಪ್ರದೇಶಗಳಿಗೆ ವಿಸ್ತರಣೆ, ನವೆಂಬರ್ 20 ರಂದು ಚಾಮರಾಜನಗರದಲ್ಲಿ ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನಾವೀನ್ಯತೆಯ ಸಹಕಾರಿ ವ್ಯವಹಾರದ ಮಾದರಿಗಳು ಕುರಿತ ಶೀರ್ಷಿಕೆಗಳಡಿ ಸಹಕಾರ ಸಪ್ತಾಹವನ್ನು ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಹಕಾರಿ ಕ್ಷೇತ್ರದ ಬೆಳವಣಿಗೆ ಇಂದಿನ ಯುವ ಜನತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ಸಂಸ್ಥೆಗಳಲ್ಲಿ ದೊರೆಯುವ ವಿವಿಧ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಸಹಕಾರ ಚಳುವಳಿಯನ್ನು ಬಲಪಡಿಸಲು ಸಹಕಾರ ಸಂಸ್ಥೆಗಳಿಗೆ ಸರ್ಕಾರ ಅಗತ್ಯ ಮಾರ್ಗದರ್ಶನ ನೀಡುತ್ತಿದೆ. ರೈತರ ಅಭಿವೃದ್ಧಿಗಾಗಿ ಈ ವರ್ಷ 36 ಲಕ್ಷ ರೈತರಿಗೆ 27 ಸಾವಿರ ಕೋಟಿ ರೂ.ಗಳ ಬೆಳೆ ಸಾಲದ ಗುರಿಯನ್ನು ಹೊಂದಿದೆ. ಸಹಕಾರ ಸಂಸ್ಥೆಗಳಲ್ಲಿ ಸದಸ್ಯರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಅನುμÁ್ಠನಗೊಳಿಸಿ, ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ. ಈಗಾಗಲೇ 41 ಲಕ್ಷ ಸದಸ್ಯರ ನೋಂದಣಿ ಗುರಿಯನ್ನು ನಿಗದಿಪಡಿಸಲಾಗಿದೆ ಎಂದರು.

ರಾಷ್ಟ್ರದಲ್ಲಿ 8.5 ಲಕ್ಷ ಸಹಕಾರ ಸಂಸ್ಥೆಗಳಿದ್ದು, 31 ಕೋಟಿ ಜನ ಸದಸ್ಯರಿದ್ದಾರೆ. ಕರ್ನಾಟಕದಲ್ಲಿ 47000 ಸಹಕಾರ ಸಂಸ್ಥೆಗಳು ಕ್ರಿಯಾಶೀಲ ಸೇವೆಯಲ್ಲಿ ತೊಡಗಿಸಿಕೊಂಡಿವೆ. 2 ಕೋಟಿ 72 ಲಕ್ಷ ಜನ ಸದಸ್ಯರಿದ್ದಾರೆ. ಹೈನುಗಾರಿಕೆ, ಕೃಷಿಪತ್ತಿನ ಸಹಕಾರ ವ್ಯವಸ್ಥೆ, ಪಟ್ಟಣ ಸಹಕಾರ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಅತ್ಯುತ್ತಮ ಸೇವೆ ಸಲ್ಲಿಸುತ್ತಿವೆ. ಸಹಕಾರಿ ವಲಯ ರಾಷ್ಟ್ರದ ಬಡತನ ನಿವಾರಣೆ, ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ರಾಷ್ಟ್ರದ ಜಿ.ಡಿ.ಪಿ ಹೆಚ್ಚಳಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಮಹಿಳಾ ಸ್ವಾವಲಂಬನೆಯಲ್ಲಿ ಮಹತ್ತರವಾದ ಪಾತ್ರವನ್ನು ಇಂದು ಸಹಕಾರ ವಲಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ರಾಜ್ಯದ ಸಹಕಾರ ಚಳವಳಿಯ ಬೆಳವಣಿಗೆಯಲ್ಲಿ ಯುವಜನರು, ಮಹಿಳೆಯರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಹಾಗೂ ಸಹಕಾರ ಸಂಸ್ಥೆಗಳಲ್ಲಿ ದೊರೆಯುವ ಪ್ರಯೋಜನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವಂತೆ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಟಿ.ಸೋಮಶೇಖರ್, ಶಾಸಕರಾದ ಕೆ. ಷಡಕ್ಷರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)