ಬೆಂಗಳೂರು: ಜಯನಗರ 8ನೇ ಬಡಾವಣೆಯಲ್ಲಿರುವ ಜಯರಾಮ ಸೇವಾ ಮಂಡಳಿಯಲ್ಲಿ ರಾಮಾಯಣದ ಸರ್ವಾದರಣೀಯ ಪಾರಾಯಣ ಕಾಂಡವಾದ ಸುಂದರಕಾಂಡ ಕುರಿತು ಐದು ದಿನಗಳ ಪ್ರವಚನ ಮಾಲಿಕೆಯನ್ನು ಆಯೋಜಿಸಲಾಗಿತ್ತು. ಕನ್ನಡ ನಾಡಿನ ಖ್ಯಾತ ಸಾಹಿತ್ಯ ಚಿಂತಕ ಹಾಗೂ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರಜಗಿ ಅವರು ಈ ಉಪನ್ಯಾಸ ಸರಣಿಯನ್ನು ನಡೆಸಿಕೊಟ್ಟರು.ಸಾಂಸ್ಕೃತಿಕ–ಧಾರ್ಮಿಕ–ಸಾಮಾಜಿಕ ಚಟುವಟಿಕೆಗಳ ಮೂಲಕ ನಗರದೊಳಗೆ ತನ್ನದೇ ಆದ ಅಸ್ಮಿತೆಯನ್ನು ಗಳಿಸಿಕೊಂಡಿರುವ ಜಯರಾಮ ಸೇವಾ ಮಂಡಳಿ, ಆರು ದಶಕಗಳ ಸಮಾಜಮುಖಿ ಸೇವೆಯೊಂದಿಗೆ ದೃಢವಾದ ನೆಲೆಗಟ್ಟನ್ನು ನಿರ್ಮಿಸಿಕೊಂಡಿದೆ. ವಜ್ರಮಹೋತ್ಸವದ ದಿಕ್ಕಿನಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ ಮೌಲಿಕ ಹಾಗೂ ರಚನಾತ್ಮಕ ಚಿಂತನೆಗೆ ವೇದಿಕೆಯಾಗುವ ಉದ್ದೇಶದಿಂದ ಈ ಪ್ರವಚನ ಮಾಲಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಪದಾಧಿಕಾರಿಗಳು ತಿಳಿಸಿದರು.
ಈ ಪ್ರವಚನ ಮಾಲಿಕೆಯ ವಿಷಯವನ್ನು ಮುಂದಿನ ದಿನಗಳಲ್ಲಿ ಮುದ್ರಣ ರೂಪದಲ್ಲಿಯೂ ಪ್ರಕಟಿಸುವ ಯೋಜನೆ ಇದೆ. ಕಾರ್ಯಕ್ರಮದಲ್ಲಿ ಅಧ್ಯಾತ್ಮ ಚಿಂತಕಿ ಶ್ರೀಮತಿ ವೀಣಾ ನಿತ್ಯಾನಂದ, ದೇವಾಲಯದ ಅಧ್ಯಕ್ಷ ಎಸ್.ಕೆ. ಗೋಪಾಲಕೃಷ್ಣ, ಕಾರ್ಯದರ್ಶಿ ಡಾ.ಎಚ್. ಸುಂದರಮೂರ್ತಿ, ನಿಕಟಪೂರ್ವ ಅಧ್ಯಕ್ಷ ಆರ್.ಎನ್. ಸ್ವಾಮಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಪಿ. ರಘೋತ್ತಮ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾಹಿತ್ಯ ಪ್ರಸಾರ ಮತ್ತು ಪ್ರಕಟಣೆಯು ಜಯರಾಮ ಸೇವಾ ಮಂಡಳಿಯ ಪ್ರಮುಖ ಚಟುವಟಿಕೆಗಳಾಗಿದ್ದು, ರಾಮಾಯಣ ಆಧಾರಿತ ವ್ಯಕ್ತಿ ಮತ್ತು ಪ್ರಸಂಗಗಳನ್ನು ಒಳಗೊಂಡ ಅನೇಕ ಕೃತಿಗಳನ್ನು ಕಳೆದ ಐದು ದಶಕಗಳಲ್ಲಿ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದೆ. ಸಚಿತ್ರ ರಾಮಾಯಣ, ಶ್ರೀರಾಮ ಸಂಭವ, ಶ್ರೀರಾಮ ರಜತಾದ್ರಿ, ಬಾಳಿಗೊಂದು ಬೆಳಕು ಮುಂತಾದವು ಮಂಡಳಿಯ ಹೆಮ್ಮೆಯ ಪ್ರಕಟಣೆಗಳಾಗಿವೆ.