ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು, ಮಾದಕ ವ್ಯಸನಿಗಳಾಗುತ್ತಿದ್ದು, ಶಿಕ್ಷಣದ ಕಡೆ ಆದ್ಯತೆ ನೀಡುತ್ತಿಲ್ಲ. ಇದರಿಂದ ಅವರ ಭವಿಷ್ಯ ಕುಂಠಿತಗೊಳ್ಳುತ್ತಿದೆ ಆದ್ದರಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಚಟಕ್ಕೆ ಒಳಗಾಗದೇ ಶಿಕ್ಷಣದ ಕಡೆ ತಮ್ಮ ಗಮನ ನೀಡಬೇಕು ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇಂದು ಸಿಎಂಆರ್ ಇನ್ಸಿಟ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ಬೆಳ್ಳಿ ಮಹೋತ್ಸವ ಆಚರಣೆಗಳು ಮತ್ತು ಇನ್ಕ್ಯುಬೇಷನ್ ಸೆಂಟರ್ ಮತ್ತು ಆಡಿಟೋರಿಯಂ ಅನಾವರಣಗೊಳಿಸಿ ಅವರು ಮಾತನಾಡಿದರು.
ಸಿಎಂಆರ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಯಾವುದೇ ರೀತಿಯ ದುಶ್ಚಟಗಳಿಗೆ ಒಳಗಾಗದೇ ತಮ್ಮ ಓದಿನ ಕಡೆ ಗಮನಹರಿಸಿ ಪೋಷಕರಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಗೌರವ ತರಬೇಕು ಎಂದು ಹೇಳಿದರು.ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣ ಸಂಸ್ಥೆಗಳಿಗೆ ದಾಖಲು ಮಾಡಿ ಸುಮ್ಮನೆ ಮನೆಯಲ್ಲಿಯೇ ಇರಬಾರದು. ಆಗಿಂದಾಗ್ಗೆ ತಮ್ಮ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರತರಾಗಿದ್ದಾರೆಯೇ ಇಲ್ಲ ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ವಿದ್ಯಾರ್ಥಿಗಳಿಗಿಂತ ಪೋಷಕರ ಪಾತ್ರ ಹೆಚ್ಚಿನ ಜವಾಬ್ದಾರಿಯುತವಾಗಿರುತ್ತದೆ. ಅದೇ ರೀತಿ ಶಿಕ್ಷಣ ಸಂಸ್ಥೆಗಳು ಸಹ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಗಮನಿಸಿ ಪೋಷಕರ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ದೇಶಕ್ಕೆ ಕೀರ್ತಿ ತರುವಂತಹ ಆವಿಷ್ಕಾರಗಳನ್ನು ರೂಪಿಸಬೇಕು. ಸಿಎಂಆರ್ ವಿದ್ಯಾಸಂಸ್ಥೆಯಲ್ಲಿ ಸ್ಥಾಪಿತವಾಗಿರುವ ಇನ್ಕ್ಯುಬೇಷನ್ ಸೆಂಟರ್ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹೆಚ್ಚುನ ಅನುಕೂಲ ಕಲ್ಪಿಸಿಕೊಡಲಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಭವಿಷ್ಯ ರೂಪಿಸುವ ತಂತ್ರಜ್ಞಾನಕ್ಕೆ ಮಾನವೀಯ ಸ್ಪರ್ಶ ಅಗತ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಮಾತನಾಡಿ, ತಂತ್ರಜ್ಞಾನದ ಬಳಕೆಯು ಮಾನವೀಯತೆಗೆ ಪ್ರಯೋಜನವಾದಾಗ ಮಾತ್ರ ಅದು ಅರ್ಥಪೂರ್ಣವಾಗಿರುತ್ತದೆ. ಇಂದು ತ್ವರಿತ ತಾಂತ್ರಿಕ ಬದಲಾವಣೆಯ ಯುಗ. ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್, ರೊಬೊಟಿಕ್ಸ್, ಹಸಿರು ತಂತ್ರಜ್ಞಾನ ಮತ್ತು ಡಿಜಿಟಲ್ ಆರ್ಥಿಕತೆಯು ನಮ್ಮ ಭವಿಷ್ಯವನ್ನು ರೂಪಿಸುತ್ತಿವೆ. ಈ ಕಾಲದಲ್ಲಿ, ಶಿಕ್ಷಣ ಸಂಸ್ಥೆಗಳ ಪಾತ್ರವು ಇನ್ನಷ್ಟು ನಿರ್ಣಾಯಕವಾಗುತ್ತಿದೆ ಎಂದರು.
ಈ ದಿನ ಸಿಎಂಆರ್ ಸಂಸ್ಥೆಯಲ್ಲಿ ಉದ್ಘಾಟನೆಗೊಂಡ ಇನ್ಕ್ಯುಬೇಶನ್ ಸೆಂಟರ್ "ಸ್ಟಾರ್ಟ್ ಅಪ್ ಇಂಡಿಯಾ" ಮತ್ತು "ಆತ್ಮನಿರ್ಭರ ಭಾರತ"ದ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಕೇಂದ್ರವು ನಾವೀನ್ಯತೆಯನ್ನು ಬೆಳೆಸುತ್ತದೆ, ಯುವಜನರ ಆಲೋಚನೆಗಳನ್ನು ಉದ್ಯಮಗಳಾಗಿ ಪರಿವರ್ತಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಗೆ ಪ್ರಬಲ ವಾಹನವಾಗುತ್ತದೆ. ಇಲ್ಲಿಂದ ಹೊರಹೊಮ್ಮುವ ಸ್ಟಾರ್ಟ್ ಅಪ್ಗಳು ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ ಪ್ರಯಾಣ ಬೆಳೆಸುತ್ತವೆ ಮತ್ತು ಭಾರತದ ಆರ್ಥಿಕತೆಗೆ ಶಕ್ತಿ ತುಂಬುತ್ತದೆ ಎಂಬ ನಂಬಿಕೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.
ಪ್ರಿಯ ವಿದ್ಯಾರ್ಥಿಗಳೇ, ನೀವು ದೇಶದ ದೊಡ್ಡ ಶಕ್ತಿ. 21 ನೇ ಶತಮಾನದ ಭಾರತವು ನಿಮ್ಮಿಂದ ತಾಂತ್ರಿಕ ಪ್ರಾವೀಣ್ಯತೆಯನ್ನು ಮಾತ್ರವಲ್ಲದೆ ನೀತಿಶಾಸ್ತ್ರ, ನಾವೀನ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಸಹ ನಿರೀಕ್ಷಿಸುತ್ತದೆ. ಯೋಗಕ್ಷೇಮ, ಸೇರ್ಪಡೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಿ. ಬೆಳೆದಂತೆಲ್ಲ ನೀವು ಕುತೂಹಲದಿಂದಿರಿ, ಪ್ರಶ್ನಿಸಿ, ಪ್ರಯೋಗಿಸಿ ಮತ್ತು ವೈಫಲ್ಯಗಳಿಂದ ಪಾಠ ಕಲಿಯಿರಿ” ಎಂದು ಕಿವಿಮಾತು ಹೇಳಿದರು.
ಪ್ರಸ್ತುತ ಭಾರತವು "2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ" ಎಂಬ ಗುರಿಯತ್ತ ಸಾಗುತ್ತಿದೆ. ಈ ಗುರಿಯನ್ನು ಸಾಧಿಸುವಲ್ಲಿ ಎಂಜಿನಿಯರ್ಗಳು, ವಿಜ್ಞಾನಿಗಳು ಮತ್ತು ನಾವೀನ್ಯಕಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವು ಯುವಜನರ ಹೆಗಲ ಮೇಲೆ ನಿಂತಿದೆ. ಯುವಜನತೆಯ ಪ್ರತಿಭೆಯನ್ನು ವೈಯಕ್ತಿಕ ಯಶಸ್ಸು ಮತ್ತು ರಾಷ್ಟ್ರ ನಿರ್ಮಾಣ ಎರಡಕ್ಕೂ ಬಳಸಬೇಕು ಎಂದು ಕರೆ ನೀಡಿದರು.
ಕರ್ನಾಟಕವು ಶಿಕ್ಷಣ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಬೆಂಗಳೂರು ಭಾರತದ ಶಿಕ್ಷಣ ಮತ್ತು ಐಟಿ ಕೇಂದ್ರ ಎಂದು ಪ್ರಸಿದ್ಧವಾಗಿದೆ. ಇದು ಸಿಎಂಆರ್ ಸಂಸ್ಥೆಗಳ ಸಮೂಹ ಸೇರಿದಂತೆ ಹಲವಾರು ವಿಶ್ವ ದರ್ಜೆಯ ಸಂಶೋಧನಾ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ನೆಲೆಯಾಗಿದೆ ಮತ್ತು ಸಿಎಂಆರ್ ತಂತ್ರಜ್ಞಾನ ಸಂಸ್ಥೆಯು ಬೆಂಗಳೂರನ್ನು ಐಟಿ ಕೇಂದ್ರವಾಗಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಿಎಂಆರ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಈ ದಿನ ಮಹತ್ವದ ದಿನವಾಗಿದ್ದು, ಇದು 25 ವರ್ಷಗಳ ಶೈಕ್ಷಣಿಕ ಇತಿಹಾಸದ ಬೆಳ್ಳಿ ಮಹೋತ್ಸವವನ್ನು ಆಚರಿಸುತ್ತಿದೆ. ಇದಲ್ಲದೆ, ಇನ್ಕ್ಯುಬೇಷನ್ ಸೆಂಟರ್ ಮತ್ತು ಆಧುನಿಕ ಸಭಾಂಗಣದ ಉದ್ಘಾಟನೆಯು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯ ನಿರಂತರ ಪ್ರಗತಿಗೆ ಸಾಕ್ಷಿಯಾಗಿದೆ. ಸಿಎಂಆರ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಕಳೆದ 25 ವರ್ಷಗಳಲ್ಲಿ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಜಾಗತಿಕ ಐಟಿ ಮತ್ತು ನಾವೀನ್ಯತೆ ಕೇಂದ್ರವಾದ ಬೆಂಗಳೂರಿನಲ್ಲಿರುವ ಈ ಸಂಸ್ಥೆ, ಶಿಕ್ಷಣ, ಕೈಗಾರಿಕೆ ಮತ್ತು ಸಂಶೋಧನೆಯ ಒಮ್ಮುಖಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ರಾಜ್ಯಪಾಲರು ಪ್ರಶಂಸಿದರು.
ಎನ್ಪಿಎಸ್ ಸಮೂಹ ಸಂಸ್ಥೆಗಳು, ಎನ್ಎಫ್ಎಲ್ ಮತ್ತು ಟಿಐಎಸ್ಬಿ ಅಧ್ಯಕ್ಷರಾದ ಡಾ.ಕೆ.ಪಿ.ಗೋಪಾಲಕೃಷ್ಣ, ಸಿಎಂಆರ್ ಸಂಸ್ಥೆಗಳ ಸಮೂಹದ ಅಧ್ಯಕ್ಷರಾದ ಡಾ. ಕೆ.ಸಿ. ರಾಮಮೂರ್ತಿ, ಜ್ಞಾನಧಾರ ಟ್ರಸ್ಟ್ನ ಅಧ್ಯಕ್ಷೆ ಮತ್ತು ಸಿಎಂಆರ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಬಿತಾ ರಾಮಮೂರ್ತಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.