ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ -೨೦೨೨' ಕರಡು ಸಲ್ಲಿಕೆಗೆ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತ

varthajala
0
*'ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ -೨೦೨೨' ಕರಡು ಸಲ್ಲಿಕೆಗೆ  ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತ :
ಪಕ್ಷಬೇಧ ಮರೆತು ವಿಧೇಯಕವನ್ನು ಬೆಂಬಲಿಸಲು ಶಾಸಕರಲ್ಲಿ ಮನವಿ - ನಾಡೋಜ ಡಾ. ಮಹೇಶ ಜೋಶಿ*
 
ಬೆಂಗಳೂರು: ನ್ಯಾಯಮೂರ್ತಿ ಎಸ್‌.ಆರ್.‌ ಬನ್ನೂರಮಠ  ಅವರ ನೇತೃತ್ವದ ಕರ್ನಾಟಕ ಕಾನೂನು ಆಯೋಗವು *ʻಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨*ʼರ  ಕರಡನ್ನು ಸಿದ್ಧಪಡಿಸಿ *ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ* ಅವರಿಗೆ ಸಲ್ಲಿಸಿದೆ. ಆಳವಾಗಿ ಅಧ್ಯಯನ ನಡೆಸಿ, ಚರ್ಚಿಸಿ ತಯಾರು ಮಾಡಲಾದ ಈ ವಿಧೇಯಕದ ಕರಡನ್ನು ಸರಕಾರಕ್ಕೆ ಜಾರಿ ಮಾಡುವ ಅನಿವಾರ್ಯತೆ ಇದೆ. ಕನ್ನಡ ಭಾಷೆ ಅಭಿವೃದ್ಧಿಗಾಗಿ ಕಾನೂನು ಆಯೋಗ ಹಮ್ಮಿಕೊಂಡಿರುವ ಈ ಕಾರ್ಯ ಶ್ರೇಷ್ಠ ಹಾಗೂ ಸಮಯೋಚಿತವಾಗಿದೆ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ* ಹೇಳಿದ್ದಾರೆ.
 ನಾಡಿನಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವುದರ ಜೊತೆಗೆ ಅನ್ಯ ಭಾಷೆಗಳ ದಬ್ಬಾಳಿಕೆ ತಗ್ಗಿಸಲು ಜಾರಿಗೆ ತರಲಾಗುತ್ತಿರುವ ʻ*ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ -೨೦೨೨*ʼದಿಂದ ರಾಜ್ಯದಲ್ಲಿ ಕನ್ನಡವನ್ನು ಬಲಪಡಿಸಲು ಅನುಕೂಲವಾಗುವುದು. ಈಗಾಗಲೇ ವಿಧೇಯಕದ ಕರಡು ಪ್ರತಿಯನ್ನು ಕಾನೂನು ಆಯೋಗವು ಕಾನೂನು ಇಲಾಖೆ ತಜ್ಞರೊಂದಿಗೆ ವಿಮರ್ಶೆ ಮಾಡಿ ಸಿದ್ಧಪಡಿಸಿದ್ದು ಸಂತಸದ ಸಂಗತಿ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜೊತೆ ಸಮನ್ವಯದಲ್ಲಿ  ಕನ್ನಡ ಕಟ್ಟುವ ಕಾರ್ಯ ನಿರಂತರ ಮಾಡುತ್ತ ಬಂದಿದೆ. ಕನ್ನಡದ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ ೧೦೭ ವಷಗಳಿಂದ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಈ ವಿಧೇಯಕ ಜಾರಿಗೆ ಬರುವುದರಿಂದ  ಆನೆ ಬಲ ಬಂದಂತಾಗುವುದು ಎಂದು *ಡಾ. ಮಹೇಶ ಜೋಶಿ* ಸಂತಸ ವ್ಯಕ್ತ ಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ, ತಾಲೂಕಾ ಹಾಗೂ ಹೊಬಳಿ ಘಟಕಗಳ ಅಧ್ಯಕ್ಷರ ಮೂಲಕ ವಿಧಾನಸಭೆಯ ಎಲ್ಲ ಸದಸ್ಯರನ್ನು ಸಂಪರ್ಕಿಸಿ ವಿಧೇಯಕದ ಮಹತ್ವ ಮತ್ತು ಅನಿವಾರ್ಯತೆಯನ್ನು ತಿಳಿಯಪಡಿಸಲಿದೆ. ಜೊತೆಗೆ ಮುಂದಿನ ಅಧಿವೇಶನದಲ್ಲಿ *ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨* ನ್ನು  ಸದನದಲ್ಲಿ ಪಕ್ಷಬೇಧ ಮರೆತು ʻʻ*ನಾವೆಲ್ಲಾ ಕನ್ನಡಿಗರು*ʼʼ ಎನ್ನುವ ಒಂದೇ ಮನೋಭಾವನೆಯಲ್ಲಿ ಒಕ್ಕೊರಲ ಒಪ್ಪಿಗೆ ಸೂಚಿಸಲು ಮನವಿ ಮಾಡಿಕೊಳ್ಳಲಿದೆ. ಸಂವಿಧಾನದ ಅನುಚ್ಛೇದ ೩೪೫ರಂತೆ ಪ್ರತಿ ರಾಜ್ಯದಲ್ಲಿ ಒಂದು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿಸಿಕೊಳ್ಳಲು ಅವಕಾಶವಿದೆ. ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆ ಅಧಿಕೃತ ಭಾಷೆಯಾಗಿದೆ. ನಮ್ಮ ಆಡಳಿತ ಭಾಷೆಯನ್ನು ಅಭಿವೃದ್ಧಿಪಡಿಸಲು ಸರಕಾರ ರಾಜ್ಯಭಾಷಾ ಅಧಿನಿಯಮ ೧೯೬೩ ಮತ್ತು ಸ್ಥಳೀಯ ಪ್ರಾಧಿಕಾರಗಳ ಅಧಿನಿಯಮ-೧೯೮೧ ಜಾರಿಗೆ ತಂದಿದೆ. ಇದರೊಂದಿಗೆ ಕನ್ನಡಕ್ಕೆ ಇನ್ನಷ್ಟು ಪುಷ್ಟಿ ನೀಡುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ-೧೯೯೪ನ್ನು ಸಹ ರೂಪಿಸಲಾಗಿದೆ. ಹೀಗೆ ಅನೇಕ ಕಾನೂನುಗಳಿದ್ದರೂ ಸಹಿತ ಸೂಕ್ತವಾಗಿ ಕನ್ನಡ ಅನುಷ್ಠಾನ ಆಗದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಜಾರಿಯಾಗಲಿರುವ ಅಧಿನಿಯಮದಿಂದ ಕನ್ನಡ ಭಾಷೆಯ ಪುನರುತ್ಥಾನಕ್ಕೆ ಒತ್ತು ನೀಡಿದಂತಾಗಲಿದೆ.
 ಎಸ್‌ಎಸ್‌ಎಲ್‌ಸಿ, ತತ್ಸಮಾನ ಪರೀಕ್ಷೆಗಳವರೆಗೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯದ ಉನ್ನತ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕನ್ನಡ ಭಾಷೆ ಬೋಧನೆ. ಉದ್ಯೋಗದಲ್ಲಿ, ನ್ಯಾಯಾಂಗದಲ್ಲಿ, ಸರಕಾರಿ ಅನುದಾನ ಹಾಗೂ ಅನುದಾನರಹಿತ ಸಂಸ್ಥೆಗಳ ಕಾರ್ಯಕ್ರಮದ ಕರಪತ್ರ, ಬ್ಯಾನರ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಲು ಪ್ರಸಕ್ತ ವಿಧೇಯಕದ ಕರಡುವಿನಲ್ಲಿ ಪ್ರಸ್ತಾಪಿಸಲಾಗಿದೆ. ಅಂಗಡಿ ಮಳಿಗೆಗಳು, ಆಸ್ಪತ್ರೆಗಳು, ಕಚೇರಿಗಳು ಸೇರಿದಂತೆ ಎಲ್ಲಾ ಪ್ರಕಾರದ ನಾಮಫಲಕದಲ್ಲಿ ಕಡ್ಡಾಯವಾಗಿ ಅರ್ಧದಷ್ಟು ಬರಹ ಕನ್ನಡದಲ್ಲಿಯೇ ಇರಬೇಕು. ೧೦೦ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕಾ ಸಂಸ್ಥೆಗಳಲ್ಲಿ ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಕಾರ್ಯಾಗಾರ ನಡೆಸುವುದರೊಂದಿಗೆ ಕನ್ನಡಿಗರಿಗೆ ಮೊದಲ ಪ್ರಾಧಾನ್ಯ ನೀಡುವುದು, ಮುಂತಾದ ವಿಷಯಗಳನ್ನು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ರಲ್ಲಿ ಅಳವಡಿಸಿರುವುದು ಅತ್ಯಂತ ಸಮರ್ಪಕವಾಗಿದೆ.
ಅದರಂತೆ ವಿಧೇಯಕದಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಬಗ್ಗೆ ಕೀಳರಿಮೆ ಮಾಡಿದರೆ ಅಥವಾ ವಿಧೇಯಕದ ಬಗ್ಗೆ ನಿರ್ಲಕ್ಷ್ಯ ತೋರಿದರೆ ತೆರಿಗೆ ವಿನಾಯತಿ, ಧನಸಹಾಯ ಸೇರಿದಂತೆ ಸರಕಾರ ನೀಡುವ ಇತರೇ ಸೌಲಭ್ಯಗಳನ್ನು ತಡೆ ಹಿಡಿಯುವ ಮತ್ತು ನಿಯಮಗಳ ಉಲ್ಲಂಘಿಸಿದರೆ ಕಾರಣ ಕೇಳಿ ನೋಟಿಸು ನೀಡಲು ಅವಕಾಶ ಇರುತ್ತದೆ. ತಪ್ಪಿತಸ್ಥರ ವಿರುದ್ಧ ಮೊದಲನೇ ಅಪರಾಧಕ್ಕೆ ೫೦೦೦ ರೂ., ಎರಡನೆಯ ಅಪರಾಧಕ್ಕೆ ೧೦,೦೦೦ ರೂ. ನಂತರ ಪ್ರತಿ ಅಪರಾಧಕ್ಕೆ ೨೦,೦೦೦ ರೂ ದಂಡ ವಿಧಿಸುವದರ ಜೊತೆ ಪರವಾನಗಿ ರದ್ದುಪಡಿಸುವ ಕಠಿಣಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಿದ್ದು ಕನ್ನಡ ಭಾಷೆ ಉಳಿಸಿ ಬೆಳೆಸಲು ಅನುಕೂಲವಾಗಲಿದೆ.
 ಇಂಥಹ ಮಹತ್ವದ ವಿಧೇಯಕವನ್ನು ಆಗಸ್ಟ್‌ ನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸುವ ಮೂಲಕ ಸರಕಾರ ಮುತುವರ್ಜಿ ವಹಿಸಿ ಜಾರಿ ತರುವುದಕ್ಕೆ ಮುಂದಾಗಬೇಕು. ಈ ಕ್ರಮಕ್ಕೆ ಎಲ್ಲಾ ಶಾಸಕರು ಪಕ್ಷಭೇದ ಮರೆತು ಕನ್ನಡ-ಕನ್ನಡಿಗ-ಕರ್ನಾಟಕ ಸ್ವಾಭಿಮಾನಕ್ಕಾಗಿ ಒಂದಾಗಿ ಮುಂದಿನ ಅಧಿವೇಶನದಲ್ಲಿ ಜಾರಿತರಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸಿದೆ. ಇದರೊಂದಿಗೆ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರಿಗೂ ಹಾಗೂ ಎಲ್ಲ ಶಾಸಕರಿಗೂ ವೈಯಕ್ತಿಕವಾಗಿ ಪತ್ರ ಬರೆದು ಒತ್ತಾಯಿಸಲಿದೆ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ* ತಿಳಿಸಿದ್ದಾರೆ.

Post a Comment

0Comments

Post a Comment (0)