ಮೈಸೂರು/ ಬೆಂಗಳೂರು, ಏಪ್ರಿಲ್ 17, (ಕರ್ನಾಟಕ ವಾರ್ತೆ): ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಮುಖ್ಯ ಎಂದು ದಕ್ಷಿಣ ವಲಯದ Police ಉಪ ಮಹಾನಿರೀಕ್ಷಕ ಡಾ.ಎಂ.ಬಿ ಬೋರಲಿಂಗಯ್ಯ ತಿಳಿಸಿದರು.
ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 50 ದಿನಗಳ ಐಎಎಸ್ ಹಾಗೂ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್ ನೋಟಿಪಿಕೇಶನ್ ಪ್ರಕಟವಾದ ಸಮಯದಲ್ಲಿ, ಕೆಲವೇ ಕೆಲವು ಹುದ್ದೆಗಳಿದ್ದರೂ ಸಹ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ. ಸರ್ಕಾರಿ ನೌಕರಿಗಿರುವ ಸೆಳೆತವೇ ಅಂತದ್ದು. ಕಠಿಣ ಪರಿಶ್ರಮವಿದ್ದರೆ ಇಂತಹ ಉದ್ಯೋಗಗಳನ್ನು ನೀವು ಪಡೆಯಬಹುದು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಾನು ಕೂಡ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದಿ ಯುಪಿಎಸ್ಸಿ ಪರೀಕ್ಷೆ ತಯಾರಿಗೆ ದೆಹಲಿಗೆ ಹೋಗಿದ್ದೆ. ತರಬೇತಿಗೆ ಬಹುತೇಕರು ಗ್ರಾಮೀಣ ಭಾಗದಿಂದ ಬಂದವರೇ ಇರುವುದು ಹೆಮ್ಮೆಯ ವಿಷಯ. ಎಲ್ಲರೂ ಶ್ರಮಪಟ್ಟು ಓದಿ. ಪ್ರಸ್ತುತ ಪರೀಕ್ಷೆ ತಯಾರಿಗೆ ದೆಹಲಿಗೆ ಹೋಗಬೇಕೆಂದಿಲ್ಲ, ಮೈಸೂರಿನ ಕೆಎಎಸ್ಒಯು ನಡೆಸುತ್ತಿರುವ ತರಬೇತಿಯು ಅತ್ಯುತ್ತಮ ತರಬೇತಿ ಕೇಂದ್ರವಾಗಿದೆ ತಿಳಿಸಿದರು.
ಕಠಿಣ ಶ್ರಮ, ಸ್ಮಾರ್ಟ್ವರ್ಕ್ ಮತ್ತು ಪರಿಶ್ರಮದ ಜೊತೆಗೆ ಓದಿನಲ್ಲಿ ತಯಾರಿ ಇರಬೇಕು. ನಿದ್ರೆಯು ಮುಖ್ಯ. ನಿದ್ದೆಗೆಟ್ಟಿ ಓದುವುದು ಬೇಡ. ಎಲ್ಲದಕ್ಕೂ ಸಮಯಪಾಲನೆ ಇದ್ದರೆ ಒಳಿತು. ತಯಾರಿ ಸಮಯದಲ್ಲಿ ವಿದ್ಯಾರ್ಥಿಗಳು ಗುಂಪು ರಚಿಸಿಕೊಂಡು ಆಯ್ಕೆವಾರು ವಿಷಯಗಳನ್ನು ಚರ್ಚಿಸಿ. ಸಾಧ್ಯವಾದಷ್ಟು ಸಾಮಾಜಿಕ ಜಾಲತಾಣದ ಗೀಳಿನಿಂದ ದೂರವಿದ್ದು, ದೈನಂದಿನ ದೈಹಿಕ ಚಟುವಟಿಕೆ ಕಡೆಗೆ ಗಮನಹರಿಸುವಂತೆ ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆ ಕುರಿತು ಮಾತನಾಡಿದ ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಜಿ.ಎಸ್.ಸೋಮಶೇಖರ್, ಪರೀಕ್ಷೆ ಎದುರಿಸುವುದಕ್ಕೆ ದೃಢ ಮನಸ್ಸು ಇರಬೇಕು. ಪರೀಕ್ಷೆ ಯಶಸ್ಸಿನ ತಂತ್ರಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು, ಆತ್ಮವಿಶ್ವಾಸ, ಸಮಯಪಾಲನೆ, ನೆನಪಿನ ಶಕ್ತಿ, ಪರೀಕ್ಷೆ ಬರೆಯುವ ತಂತ್ರ ಕಲಿತರೆ ಗೆಲುವು ನಿಮ್ಮದೆ ಎಂದು ಹೇಳಿದರು.
ನಾವು ಸಾವಿರ ಜನರಿಗಿಂತ ಮುಂದೆ ಇದ್ದೀವಿ ಎನ್ನುವ ಭರವಸೆ ನಮ್ಮಲ್ಲಿ ಇರಬೇಕು. ಪರೀಕ್ಷೆ ಬರೆದ ಮೊದಲ ಬಾರಿಯಲ್ಲಿ ಆಯ್ಕೆಯಾಗಬೇಕು ಎನ್ನುವ ಛಲ ಇರಬೇಕು. ಒಂದುವೇಳೆ ಪ್ರಥಮ ಬಾರಿ ಆಯ್ಕೆ ಆಗದೇ ಇದ್ದಾಗ ಪುನಃ ಛಲಬಿಡದೆ ಮತ್ತೆ ಮತ್ತೆ ಪ್ರಯತ್ನಿಸಿ ಎಂದು ತಿಳಿಸಿದರು.
ಯುಪಿಎಸ್ಸಿ ಅಥವಾ ಕೆಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದರೆ ಇನ್ನಿತರ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗೂ ಕೂಡ ಅನುಕೂಲವಾಗಲಿದೆ. ದಿನದ 24 ಗಂಟೆಯನ್ನು ವಿಂಗಡಿಸಿಕೊಂಡು ಸಮಯ ಪರಿಪಾಲಿಸಬೇಕು. ಪರೀಕ್ಷೆ ಬಗ್ಗೆ ತಿಳಿವಳಿಕೆ ಇರಬೇಕು. ಪಠ್ಯಕ್ರಮ, ಪರೀಕ್ಷೆ ಮಾದರಿ, ಹಿಂದಿನ ವರ್ಷದ ಪ್ರಶ್ನೆಪ್ರತ್ರಿಕೆಗಳ ಅಧ್ಯಯನದ ಜೊತೆಗೆ ಪ್ರತಿನಿತ್ಯ ದಿನಪತ್ರಿಕೆ, ನಿಮ್ಮಿಷ್ಟದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕುಲಪತಿ Prof. ಶರಣಪ್ಪ ವಿ.ಹಲಸೆ ಅವರು ಮಾತನಾಡಿ, ವಿದ್ಯಾರ್ಥಿಗಳು ಸತತ ಪ್ರಯತ್ನ ಪಟ್ಟು ಓದಬೇಕು. ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯ. ಶಿಕ್ಷಣ ಉದ್ಯೋಗದ ಜೊತೆಗೆ ಶಿಸ್ತನ್ನು ಕಲಿಸುತ್ತದೆ ಎಂದು ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಷ್ಟಪಟ್ಟಿ ಓದಿ ವಿಶ್ವಜ್ಞಾನಿ ಆಗಿದ್ದಾರೆ. ಜಗತ್ತು ಇಂದು ಅವರ ಜ್ಞಾನಕ್ಕೆ ಎದುರುತ್ತಿದೆ. ನಿರಂತರ ಪರಿಶ್ರಮದಿಂದ ಮಾತ್ರ ಇದೆಲ್ಲಾ ಸಾಧ್ಯ. ಹೀಗಾಗಿ ನಿಮ್ಮ ಓದು ನಿರಂತರವಾಗಿರಲಿ ಎಂದು ತಿಳಿಸಿದರು.
ಕುಲಸಚಿವ Prof. ಕೆ.ಬಿಪ್ರವೀಣ ಅವರು ಮಾತನಾಡಿ, ವಿದ್ಯಾರ್ಥಿಗಳು ಹಾರ್ಡ್ ವರ್ಕ್ ಜೊತೆಗೆ ಸ್ಮಾರ್ಟ್ ವರ್ಕ್ ಸಹ ಬೇಕು. ಆಸೆಪಟ್ಟು ಓದಿ. ವಿಶ್ವವಿದ್ಯಾನಿಲಯದ ಆವರಣದಲ್ಲಿ ಎಲ್ಲಾ ರೀತಿಯ ಸೌಕರ್ಯಗಳಿವೆ. ಇವುಗಳನ್ನು ಸದುಪಯೋಗಪಡೆದುಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ Prof.. ಹೆಚ್.ವಿಶ್ವನಾಥ್, ಹಣಕಾಸು ಅಧಿಕಾರಿ Prof.. ನಿರಂಜನ್ ರಾಜ್, ಅಧ್ಯಯನ ಕೇಂದ್ರದ ಡೀನ್ Prof. ರಾಮನಾಥಂನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ. ಕೊಪ್ಪಲ್ ಉಪಸ್ಥಿತರಿದ್ದರು.