ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷದ ಸಂಭ್ರಮ: ಸಿದ್ದರಾಮಯ್ಯ ಆಡಳಿತದಲ್ಲಿ ಜಾರಿಯಾದ ಪ್ರಮುಖ ಯೋಜನೆಗಳ್ಯಾವವು?

varthajala
0

 





ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ಇದೀಗ ಎರಡು ವರ್ಷ ಪೂರೈಸುತ್ತಿದೆ. ಕರ್ನಾಟಕ ಮಾದರಿ ಆಡಳಿತದ ಸೂತ್ರದೊಂದಿಗೆ ಮುನ್ನಡೆಯುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡು ವರ್ಷದಲ್ಲಿ ಅನುಷ್ಠಾನಗೊಳಿಸಿದ ಪ್ರಮುಖ ಯೋಜನೆಗಳ ರೌಂಡ್ ಅಪ್ ಇಲ್ಲಿದೆ.

ಕಾಂಗ್ರೆಸ್ ಸರ್ಕಾರ ಇದೀಗ ಎರಡು ವರ್ಷಗಳ ಹರುಷದಲ್ಲಿದೆ. ಈ ಸಂಬಂಧ ವಿಜಯನಗರದಲ್ಲಿ ಮಂಗಳವಾರ ಎರಡು ವರ್ಷಗಳ ಸಾಧನಾ ಸಮಾವೇಶ ಆಯೋಜಿಸಿದೆ. ಭರ್ಜರಿ ಬಹುಮತದೊಂದಿಗೆ ರಾಜ್ಯದ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್ ಸರ್ಕಾರ ಕರ್ನಾಟಕ ಮಾದರಿ ಎಂಬ ಪರಿಕಲ್ಪನೆಯೊಂದಿಗೆ ಆಡಳಿತ ನಡೆಸುತ್ತಿದೆ. ಮೇ 20ಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸುತ್ತಿದೆ. ಎರಡು ವರ್ಷದ ಆಡಳಿತದಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಕೆಲ ಯೋಜನೆಗಳನ್ನು ಸರ್ಕಾರ ಅನುಷ್ಠಾನ ಮಾಡಿದೆ.

ತನ್ನ ಎರಡು ವರ್ಷದ ಸಾಧನೆಯ ಪ್ರದರ್ಶನಕ್ಕಾಗಿ ವಿಜಯನಗರದ ಹೊಸಪೇಟೆಯಲ್ಲಿ ಇಂದು (ಮೇ.20) ಸಮಾವೇಶ ಮಾಡುತ್ತಿದೆ. ಈ ಸಮಾವೇಶದ ಮೂಲಕ ಕಾಂಗ್ರೆಸ್ ಸರ್ಕಾರ ತನ್ಮ ಎರಡು ವರ್ಷಗಳ ಆಡಳಿತದ ಸಾಧನೆಗಳನ್ನು ಜನರ ಮುಂದಿಡಲಿದೆ. ಪಂಚ ಗ್ಯಾರಂಟಿ ಕೇಂದ್ರಿತ ಎರಡು ವರ್ಷದ ಆಡಳಿತದಲ್ಲಿ ಸರ್ಕಾರ ಕೆಲ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಕಾಂಗ್ರೆಸ್​ ಸರ್ಕಾರ ಎರಡು ವರ್ಷದ ಆಡಳಿತದಲ್ಲಿ ಜಾರಿಗೊಳಿಸಿದ ಜನೋಪಯೋಗಿ ಪ್ರಮುಖ ಯೋಜನೆಗಳ ಹಿನ್ನೋಟ ಇಲ್ಲಿದೆ.

ಪಂಚ ಗ್ಯಾರಂಟಿ ಯೋಜನೆಗಳ ಜಾರಿ: ಪಂಚ ಗ್ಯಾರಂಟಿಗಳು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ.‌ ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ ಹಾಗೂ ಯುವ ನಿಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.‌ ಇಲ್ಲಿಯವರೆಗೆ ಗ್ಯಾರಂಟಿಗಳ ಮೂಲಕ 80 ಸಾವಿರ ಕೋಟಿ ರೂಪಾಯಿಯನ್ನು ಜನರ ಜೇಬಿಗೆ ಹಾಕಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಚುನಾವಣೆ ವೇಳೆ ಕೊಟ್ಟ ಪಂಚ ಗ್ಯಾರಂಟಿ ಭರವಸೆಗಳನ್ನೆಲ್ಲಾ ಅಧಿಕಾರಕ್ಕೆ ಬಂದ ಬಳಿಕ ಮೊದಲ ಕ್ಯಾಬಿನೆಟ್​ನಲ್ಲೇ ಜಾರಿ ಮಾಡಿ ಇದಕ್ಕಾಗಿ 80 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದೇವೆ ಎಂದಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ತಲಾ 50,000 ಕೋಟಿ ರೂ.ಗೂ ಅಧಿಕ ಅನುದಾನವನ್ನು ಪಂಚ ಗ್ಯಾರಂಟಿಗಳಿಗಾಗಿ ಹಂಚಿಕೆ ಮಾಡಲಾಗಿದೆ. ಗೃಹ ಲಕ್ಷ್ಮಿ ಯೋಜನೆಯ ಪಾವತಿಯಲ್ಲಿ ಆಗಾಗ ವಿಳಂಬವಾಗುತ್ತಿದ್ದರೆ, ಉಳಿದಂತೆ ಇತರ ಪಂಚ ಗ್ಯಾರಂಟಿಗಳು ಬಹುತೇಕ ಯಶಸ್ವಿಯಾಗಿ ಅನುಷ್ಠಾನವಾಗಿದೆ.‌ ತೀವ್ರ ಆರ್ಥಿಕ ಹೊರೆಯ ಮಧ್ಯೆ ಪಂಚ ಗ್ಯಾರಂಟಿಯನ್ನು ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡುತ್ತಿದೆ. ಈವರೆಗೆ ಒಟ್ಟು ಸುಮಾರು 1.30 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪಂಚ ಗ್ಯಾರಂಟಿಯ ಲಾಭವನ್ನು ತಲುಪಿಸಲಾಗಿದೆ.

ಬಂಡವಾಳ ಹೂಡಿಕೆದಾರರ ಸಮಾವೇಶ: ಕಾಂಗ್ರೆಸ್ ಸರ್ಕಾರ ಎರಡು ವರ್ಷದ ಆಡಳಿತಾವಧಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ ಮೂಲಕ ಗಮನ ಸೆಳೆಯಿತು.‌ ಫೆಬ್ರವರಿಯಲ್ಲಿ ನಡೆದ ಮೂರು ದಿನಗಳ ಸಮಾವೇಶದಲ್ಲಿ ಒಟ್ಟು 3250 ಉದ್ದಿಮೆದಾರರು ಭಾಗವಹಿಸಿದ್ದರು. ವಿವಿಧ ರಾಜ್ಯಗಳಿಂದ 266, ವಿದೇಶಗಳಿಂದ 72, ಕರ್ನಾಟಕ ರಾಜ್ಯದಿಂದ 2892 ಉದ್ದಿಮೆದಾರರು ಭಾಗವಹಿಸಿದ್ದರು. ಒಟ್ಟು 98 ಕಂಪನಿಗಳೊಂದಿಗೆ ಒಡಂಬಡಿಕೆಗಳಾಗಿವೆ. ಅವುಗಳ ಹೂಡಿಕೆಯು 6,23,970 ಕೋಟಿಯಾಗಲಿದೆ. ಅಲ್ಲದೆ, 4,03,533 ಕೋಟಿ ರೂ ಬಂಡವಾಳ ಹೂಡಿಕೆ ಮಾಡಲು 1101 ಕಂಪನಿಗಳು ಸಂಬಂಧಿಸಿದ ಸಮಿತಿಗಳಿಂದ ಅನುಮೋದನೆ ಪಡೆದಿದ್ದಾರೆ.‌ ಇನ್ವೆಸ್ಟ್ ಕರ್ನಾಟಕ 2025ರ ಸಮಾವೇಶದಲ್ಲಿ ಒಡಂಬಡಿಕೆ ಮಾಡಿಕೊಂಡಿರುವ ಹಾಗೂ ಅನುಮೋದನೆ ಪಡೆದಿರುವ ಯೋಜನೆಗಳಿಂದ ಅಂದಾಜು 6 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ರಾಜ್ಯ ಸರ್ಕಾರ ನಿರೀಕ್ಷೆ ಇಟ್ಟಿದೆ.

ನೋಂದಣಿಗೆ ಇ-ಖಾತಾ ಕಡ್ಡಾಯ: ರಾಜ್ಯ ಸರ್ಕಾರದ ಮಹತ್ವದ ಉಪಕ್ರಮಗಳಲ್ಲಿ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಒಂದಾಗಿದೆ. ಇ-ಖಾತಾ ಇಲ್ಲದೆ ಯಾವುದೇ ಆಸ್ತಿಗಳನ್ನು ನೋಂದಣಿ ಮಾಡಲಾಗುವುದಿಲ್ಲ‌. ಮ್ಯಾನ್ಯುವಲ್ ಖಾತಾ ಮೂಲಕ ಆಸ್ತಿ ನೋಂದಣಿ ಮಾಡಲಾಗುತ್ತಿತ್ತು. ಅದರಿಂದ ಹಲವು ವಂಚನೆ, ನಕಲಿ ನೋಂದಣಿಗಳು ನಡೆಯುತ್ತಿವೆ. ಇದಕ್ಕೆ ತಡೆಯೊಡ್ಡಲು ರಾಜ್ಯ ಸರ್ಕಾರ ಇ.ಖಾತಾ ಕಡ್ಡಾಯಗೊಳಿಸುವ ಕ್ರಮ ಕೈಗೊಂಡಿದೆ. ಇದರಿಂದ ಸಾರ್ವಜನಿಕರು ಆಸ್ತಿ ವಹಿವಾಟು ವೇಳೆ ಮೋಸ, ವಂಚನೆಕ್ಕೊಳಗಾಗುವುದಕ್ಕೆ ತಡೆ ಬೀಳಲಿದೆ.

ಖಾತಾ ಇಲ್ಲದವರಿಗೆ ಇ-ಖಾತಾ ಅಭಿಯಾನ: ಬೆಂಗಳೂರು ಹೊರತುಪಡಿಸಿ ರಾಜ್ಯದ ಬೇರೆ ಬೇರೆ ಸ್ಥಳೀಯ ಸಂಸ್ಥೆಗಳ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ 55 ಲಕ್ಷ ನಿವೇಶನಗಳಿವೆ. ಈ ಪೈಕಿ 22 ಲಕ್ಷ ನಿವೇಶನ ಮಾಲೀಕರು ಇ- ಖಾತಾ ಮಾಡಿಸಿದ್ದಾರೆ. ಆದರೆ, 30 ರಿಂದ 32 ಲಕ್ಷ ನಿವೇಶನ ಆಸ್ತಿಗಳಿಗೆ ಯಾವುದೇ ರೀತಿಯಾದ ಇ-ದಾಖಲೆ ಇರುವುದಿಲ್ಲ. ಈ ಎಲ್ಲರಿಗೂ ಒನ್ ಟೈಮ್ ಮಾದರಿಯಲ್ಲಿ ಬಿ-ಖಾತಾ ನೀಡಲು ಕಂದಾಯ ಇಲಾಖೆ ತೀರ್ಮಾನಿಸಿರುವುದು ಮಹತ್ವದ ಯೋಜನೆಯಾಗಿದೆ.

ದಾಖಲೆ ಇಲ್ಲದ ನಿವೇಶನಗಳ ಮಾಲೀಕರಿಗೆ ಒಮ್ಮೆ ಇ-ಆಸ್ತಿ ನಮೂದಿಸಲು ಅನುವಾಗುವಂತೆ ಮೂರು ತಿಂಗಳ ಒಳಗೆ ಅಭಿಯಾನ ಮಾದರಿಯಲ್ಲಿ ಬಾಕಿ ಇರುವ ಎಲ್ಲಾ ಆಸ್ತಿಗಳಿಗೆ ಬಿ-ಖಾತಾ ಮಾಡಿಸಲು ಸರ್ಕಾರ ನಿರ್ಧರಿಸಿದೆ. ನಿವೇಶನ ಆಸ್ತಿಗಳಿಗೆ ಯಾವುದೇ ರೀತಿಯಾದ ಇ-ದಾಖಲೆ ಇರುವುದಿಲ್ಲ. ಆ ಎಲ್ಲರಿಗೂ ಒನ್ ಟೈಮ್ ಮಾದರಿಯಲ್ಲಿ ಬಿ-ಖಾತಾ ನೀಡಲಾಗುತ್ತಿದೆ. ಅನಧಿಕೃತ ಬಡಾವಣೆಗಳಲ್ಲಿನ ನಿವೇಶನ, ಮನೆಗಳಿಗೆ ಬಿ-ಖಾತಾ ಅಧಿಕೃತ ದಾಖಲೆ ನೀಡಿ ಸಕ್ರಮಗೊಳಿಸುವ ನಿಟ್ಟಿನಲ್ಲಿ ಮೂರು ತಿಂಗಳವರೆಗೆ ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ. ದಾಖಲೆ ಇಲ್ಲದ ಲಕ್ಷಾಂತರ ಆಸ್ತಿ ಮಾಲೀಕರಿಗೆ ಈ ಉಪಕ್ರಮ ದೊಡ್ಡ ವರದಾನವಾಗಿ ಪರಿಣಮಿಸಿದೆ.

ಕಂದಾಯ ಇಲಾಖೆಯಿಂದ ಹಕ್ಕುಪತ್ರ ವಿತರಣೆ: ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿರುವ ಹಾಡಿ, ಹಟ್ಟಿ, ತಾಂಡಾಗಳಲ್ಲಿನ ನಿವಾಸಿಗಳಿಗೆ ‘94 ಡಿ’ ಅಡಿ ಮೇ.20ರಂದು ಒಂದು ಲಕ್ಷ ಡಿಜಿಟಲ್‌ ಹಕ್ಕು ಪತ್ರಗಳನ್ನು ವಿತರಿಸಲು ಮುಂದಾಗಿದೆ. ಮಂಗಳವಾರ ನಡೆಯಲಿರುವ ಸಾಧನಾ ಸಮಾವೇಶದ ವೇಳೆ ಕಂದಾಯ ಇಲಾಖೆ ವತಿಯಿಂದ ಡಿಜಿಟಲ್ ಹಕ್ಕು ಪತ್ರವನ್ನು ವಿತರಿಸುತ್ತಿದೆ. ಆ ಮೂಲಕ ಹಾಡಿ, ಹಟ್ಟಿ, ತಾಂಡ ನಿವಾಸಿಗಳ ಬಹುವರ್ಷಗಳ ಕನಸು ನನಸಾಗುತ್ತಿದೆ. ಮುಂದೆ ಕಾಗದದ ಹಕ್ಕು ಪತ್ರಗಳ ಬದಲಿಗೆ ಡಿಜಿಟಲ್‌ ಹಕ್ಕು ಪತ್ರಗಳನ್ನು ವಿತರಿಸಲಾಗುವುದು. ವರ್ಷದ ಅಂತ್ಯದ ವೇಳೆಗೆ ಒಟ್ಟು ಎರಡು ಲಕ್ಷ ಹಕ್ಕುಪತ್ರಗಳನ್ನು ವಿತರಿಸುವ ಗುರಿ ಹೊಂದಲಾಗಿದೆ.

ಪೋಡಿ ದುರಸ್ತಿ ಅಭಿಯಾನ: ಪೋಡಿ ದುರಸ್ತಿಯನ್ನು ಆನ್‌ಲೈನ್‌ ಮೂಲಕ ಮಾಡಿಕೊಡುವ ಮೂಲಕ ರಾಜ್ಯ ಸರ್ಕಾರ ರೈತ ಸ್ನೇಹಿ ಉಪಕ್ರಮವನ್ನು ಜಾರಿಗೊಳಿಸಿದೆ. ಪ್ರತಿ ತಿಂಗಳು 5,000 ಪೋಡಿ ದುರಸ್ತಿ ಮಾಡಿಕೊಡುವ ಗುರಿ ನಿಗದಿ ಮಾಡಲಾಗಿದ್ದು, ಇದನ್ನು ಆಂದೋಲನದ ರೂಪದಲ್ಲಿ ಮಾಡಲಾಗುತ್ತಿದೆ. ‘ಸರಳೀಕೃತ ರೂಪದಲ್ಲಿ ಪೋಡಿ ದುರಸ್ತಿ ಮಾಡಿಕೊಡಲಾಗುತ್ತಿದ್ದು, ಇದರಿಂದ ರೈತರು ಕಚೇರಿಗಳಿಗೆ ವೃಥಾ ಅಲೆಯುವುದು ತಪ್ಪಲಿದೆ. ಕಂದಾಯ ಇಲಾಖೆ ಅಧಿಕಾರಿಗಳು ಮನೆ ಮನೆಗೆ ಹೋಗಿ 1–5 ದಾಖಲೆಗಳನ್ನು ಸಿದ್ಧಪಡಿಸಲಿದ್ದಾರೆ. ಈ ಪೈಕಿ 30,476 ಪ್ರಕರಣಗಳಲ್ಲಿ ಸರ್ವೆ ಇಲಾಖೆಯಿಂದ ಭೂಮಾಪನ ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಭೂಸುರಕ್ಷಾ ಯೋಜನೆ ಜಾರಿ: ತಹಶೀಲ್ದಾರ್‌ ಕಚೇರಿಗಳಲ್ಲಿನ ‘ಎ’ ಮತ್ತು ‘ಬಿ’ ದರ್ಜೆಯ ಕಡತಗಳನ್ನು ‘ಭೂಸುರಕ್ಷಾ ಯೋಜನೆ’ಯಡಿ ಗಣಕೀಕರಣಗೊಳಿಸುವ ಮಹತ್ವದ ಜನೋಪಯೋಗಿ ಯೋಜನೆ ಗಮನ ಸೆಳೆದಿದೆ.‌ ಕಡತಗಳನ್ನು ಗಣಕೀಕರಣ ಗೊಳಿಸಿ, ಇಂಡೆಕ್ಸ್‌ ಕ್ಯಾಟಲಾಗ್‌ ಮಾಡಿ ಸ್ಕ್ಯಾನ್‌ ಮಾಡಲಾಗುತ್ತಿದೆ. ಈವರೆಗೆ 18.28 ಕೋಟಿ ಅಧಿಕ ಪುಟಗಳನ್ನು ಸ್ಕ್ಯಾನ್‌ ಮಾಡಲಾಗಿದೆ. ಈ ಯೋಜನೆಯಿಂದಾಗಿ ಇನ್ಮುಂದೆ ಆನ್‌ಲೈನ್‌ ಮೂಲಕ ಅರ್ಜಿ ಹಾಕಿ ಪ್ರಮಾಣೀಕೃತ ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಎಸ್​​ಸಿ ಒಳ ಮೀಸಲಾತಿ ಸಮೀಕ್ಷೆ: ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ಬಹುನಿರೀಕ್ಷಿತ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಳಮೀಸಲಾತಿ ಸಮೀಕ್ಷೆಯನ್ನು ನಡೆಸುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಎಸ್​ಸಿ ಸಮುದಾಯದಲ್ಲಿನ ಉಪಜಾತಿ ವರ್ಗೀಕರಣ ಸಂಬಂಧ ವಾಸ್ತವ ಅಂಕಿಅಂಶ ಪಡೆಯಲು ರಾಜ್ಯ ಸರ್ಕಾರ ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗದ ಮೂಲಕ ಒಳಮೀಸಲಾತಿ ಸಮೀಕ್ಷೆಯನ್ನು ನಡೆಸುತ್ತಿದೆ. ರಾಜ್ಯಾದ್ಯಂತ ಸುಮಾರು 58,960 ಗಣತಿದಾರರು (Enumerators) ಮೂಲಕ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದ್ದು, ಗಣತಿದಾರರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ.

ಕಾವೇರಿ 5ನೇ ಹಂತ ಯೋಜನೆ ಲೋಕಾರ್ಪಣೆ: ಬೆಂಗಳೂರು ದಶಕದಿಂದ ನಿರೀಕ್ಷಿಸುತ್ತಿದ್ಧ ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ಕಳೆದ ವರ್ಷ ಅಕ್ಟೋಬರ್​ನಲ್ಲಿ ಕಾಂಗ್ರೆಸ್ ಸರ್ಕಾರ ಲೋಕಾರ್ಪಣೆಗೊಳಿಸಿದೆ. ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿಯ ಯೋಜನೆ ಇದಾಗಿದೆ. ಕಾವೇರಿ 5ನೇ ಹಂತದ ಯೋಜನೆಯನ್ನು 2014 ರಲ್ಲಿ ರೂಪಿಸಲಾಯಿತು. 4,336 ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಯೋಜನೆ, ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ಯಲಹಂಕ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದ ವಿವಿಧ ಹಳ್ಳಿಗಳ ಮನೆ ಮನೆಗೂ ಸೇರಿದಂತೆ ಬೆಂಗಳೂರಿನ ಮೂಲೆ ಮೂಲೆಗೂ ಕಾವೇರಿ ನೀರು ಸರಬರಾಜು ಆಗಲಿದೆ. ಕಾವೇರಿ 5ನೇ ಹಂತದ ಯೋಜನೆ ಜಾರಿ ಬಳಿಕ 4 ಲಕ್ಷ ಹೊಸ ಸಂಪರ್ಕ ನೀಡಲಾಗುತ್ತಿದೆ.

ಎತ್ತಿನ‌ ಹೊಳೆ ಯೋಜನೆ ಮೊದಲ ಹಂತ ಲೋಕಾರ್ಪಣೆ: ಎತ್ತಿನಹೊಳೆ ಯೋಜನೆಯ ಮೊದಲ ಹಂತವನ್ನು ಕಾಂಗ್ರೆಸ್ ಸರ್ಕಾರ ಲೋಕಾರ್ಪಣೆಗೊಳಿಸಿದೆ. ಸಾಕಷ್ಟು ವಿಳಂಬ, ವೆಚ್ಚ ಹೆಚ್ಚಳದ ಮಧ್ಯೆ ಯೋಜನೆ ಉದ್ಘಾಟನೆಯಾಗಿದೆ‌. ಪರಿಷ್ಕೃತ ವೆಚ್ಚ ಸುಮಾರು 23,251 ಕೋಟಿ ರೂಪಾಯಿಯ ಈ ಮಹಾತ್ವಾಕಾಂಕ್ಷೆಯ ಯೋಜನೆ ಮೂಲಕ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ನೀರನ್ನು ಏತ ನೀರಾವರಿಯಿಂದ ತರಲಾಗುತ್ತಿದೆ. 7 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಸೇರಿ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನ ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ಕುಡಿಯುವ ನೀರು ದೊರೆಯಲಿದೆ.

ಇದೀಗ ಪ್ರಾಯೋಗಿಕವಾಗಿ ನೀರೆತ್ತಿ ಹರಿಯುತ್ತಿರುವ ನೀರಿನಿಂದ ಬೇಲೂರು ತಾಲೂಕಿನ ಹಳೆಬೀಡು ದ್ವಾರಸಮುದ್ರ ಕೆರೆ, ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಕೆರೆಗಳು ಭರ್ತಿಯಾಗಿವೆ. ಮೊದಲ ಹಂತದಲ್ಲಿ ಹೆಚ್ಚುವರಿಯಾಗುವ ನೀರನ್ನು ವೇದಾವತಿ ಕೊಳ್ಳದ ಮೂಲಕ ಹಿರಿಯೂರಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಹರಿಸಲಾಗುತ್ತಿದೆ. ಯೋಜನೆ ಮುಗಿದ ಬಳಿಕ ಪೂರ್ಣ ಪ್ರಮಾಣದ ನೀರು 7 ಜಿಲ್ಲೆಗಳಿಗೆ ಕಡೆಗೆ ತಿರುಗಿಸಲಾಗುತ್ತದೆ.

ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಮೀಸಲಾತಿ: ಸರ್ಕಾರಿ ಗುತ್ತಿಗೆ ಸರ್ಕಾರಿ ಕಾಮಗಾರಿಗಳಲ್ಲಿ 2 ಕೋಟಿ ರೂ.ವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ ಮತ್ತು 2ಬಿ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ಮಹತ್ವದ ತೀರ್ಮಾನ ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ. ಜೊತೆಗೆ ಸರ್ಕಾರದ ವಿವಿಧ ಇಲಾಖೆ, ನಿಗಮ, ಸಂಸ್ಥೆಗಳಲ್ಲಿ ಖರೀದಿಸುವ ಸರಕು ಮತ್ತು ಸೇವೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ ಮತ್ತು 2ಬಿ ಸರಬರಾಜುದಾರರಿಗೆ ಒಂದು ಕೋಟಿ ರೂ. ವರೆಗೆ ಮೀಸಲಾತಿ ನೀಡಲಾಗಿದೆ.‌ ವಿಪಕ್ಷ ಬಿಜೆಪಿ ವಿರೋಧದ ಮಧ್ಯೆ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ಸರ್ಕಾರಿ ಗುತ್ತಿಗೆಯಲ್ಲಿ 4% ಮೀಸಲಾತಿ ಕಲ್ಪಿಸಿದೆ.

Post a Comment

0Comments

Post a Comment (0)