ಹೀಗೇ ಇರಬೇಕೆಂದು ಶಾಸನ ವಿಧಿಸಿಕೊಂಡು ಬರೆಯುವ ಕಾವ್ಯಕ್ಕೆ ಯಾವತ್ತೂ ಉಳಿಗಾಲವಿಲ್ಲ. ಪ್ರಾಸಗಳನ್ನು ನಂಬಿಕೊAಡು ಕವಿತೆಗಳು ಗುಡಿಸುವಿಕೆಯ ಸರಕಾಗಿ ಪಕ್ಕಕ್ಕೆ ತಳ್ಳಲ್ಪಡುತ್ತವೆ. ಭಾಷಾಸೂಕ್ಷö್ಮತೆ, ಸಂವೇದನೆ ಹಾಗೂ ತನ್ನದೇ ಆದ ಪಾರಿಭಾಷಿಕ ಪದಕೋಶಗಳಿಂದ ರಚಿತವಾದ ಸಮೃದ್ಧಕಾವ್ಯ ಸಾರ್ವಕಾಲಿಕವಾಗಿರುತ್ತದೆ ಎಂದು ಹಿರಿಯ ಕವಿ, ವಿಮರ್ಶಕ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ನುಡಿದರು.
ಕನಕಪುರ ರೂರಲ್ ಕಾಲೇಜು ಆವರಣದ ಎಸ್.ಕೆ. ಹಾಲ್ನಲ್ಲಿ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಾಗೂ ಕನಕಪುರದ ರೂರಲ್ ಎಜುಕೇಷನ್ ಸೊಸೈಟಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ, ಬೆಂಗಳೂರಿನ ಪ್ರಗತಿ ಗ್ರಾಫಿಕ್ಸ್ ಪ್ರಕಟಿದ ಕವಿ ಗಟ್ಟಿಗುಂದ ಮಹದೇವ್ ಅವರ ಮಿಥುನ ಪಕ್ಷಿಗಳು ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಅನುಕರಣೆ ಅದು ಮೇರು ಕವಿಗಳದೇ ಆಗಿದ್ದರೂ ಕೆಲವೇ ಕವಿತೆಗಳಿಗೆ ಸೀಮಿತವಾಗಿ ಬರವಣಿಗೆಯೇ ನಿಂತುಹೋಗುತ್ತದೆ. ತನ್ನೊಳಗೆ ಅಂತರ್ಗತವಾಗಿರುವ ತನ್ನದೇ ಶೈಲಿಯಲ್ಲಿ ಬರೆಯಬಲ್ಲವನು ಮಾತ್ರ ಕಾವ್ಯಜಗತ್ತಿನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ. ವಿಮರ್ಶಾ ಪ್ರಜ್ಞೆಯುಳ್ಳ ಕವಿಯಿಂದ ಮಾತ್ರ ಉತ್ಕೃಷ್ಟ ಪದಸಾಲುಗಳು ಮೂಡುತ್ತವೆ. ಪದಗಳ ಅರ್ಥಕ್ಕೆ ಸೀಮಿತಗೊಳಿಸಿಕೊಂಡು ರಚನೆಯಾಗುವ ಕಾವ್ಯ ಅದು ಪದಾರ್ಥ ಕಾವ್ಯವಾಗುತ್ತದೆ. ಬದಲಿಗೆ ಬಹು ಅರ್ಥಸಾಧ್ಯತೆಗಳುಳ್ಳ ರಚನೆಯಾಗುವ ಕಾವ್ಯ ಮಾತ್ರ ಪದಕಾವ್ಯವಾಗುತ್ತದೆ. ಗಟ್ಟಿಗುಂದ ಮಹದೇವು ಅವರ ಮಿಥುನ ಪಕ್ಷಿಗಳು ಕೃತಿಯಲ್ಲಿ ಅಂತಹ ಪದಸಾಲುಗಳನ್ನು ಕಾಣಬಹುದು ಎಂದು ಶ್ಲಾಘಿಸಿದರು. ಭಾಷಾ ಅಸ್ಮಿತೆಯಿಂದ ಸಮೃದ್ಧ ಕಾವ್ಯ ರಚಿಸಿದ ಮಹದೇವು ಮುಂದಿನ ದಿನಗಳಲ್ಲಿ ವ್ಯಕ್ತಿ ಕೇಂದ್ರಿತ ನೆಲೆಯಿಂದ ಸಮಾಜದ ಆಗುಹೋಗುಗಳನ್ನು ಕೇಂದ್ರವಾಗಿಸಿಕೊAಡು ಕಾವ್ಯ ರಚಿಸುವಂತಾಗಲಿ ಎಂದು ಆಶಿಸಿದರು.
ಮಹದೇವು ಅವರ ಹಲವು ಕವಿತೆಗಳಲ್ಲಿನ ವಿಶೇಷತೆಗಳನ್ನು ಸುದೀರ್ಘವಾಗಿ ವಿವರಿಸಿದ ಸಿದ್ಧರಾಮಯ್ಯ ಅವರು ಆಕೃತಿಗಳ ಸರಳ ವ್ಯಾಖ್ಯಾನ ಕವಿತೆಯನ್ನು ಉದಾಹರಿಸಿ, ಬಹುಶಃ ಯಾವ ಪಂಡಿತ ಕವಿಯೂ ರೇಖಾಗಣಿತದ ಸಂಕೇತಗಳನ್ನು ಬಳಸಿಕೊಂಡು ಈ ಬಗೆಯ ಕವಿತೆಯೊಂದನ್ನು ರಚಿಸಿಕೊಟ್ಟಿಲ್ಲ. ಬಿಂದು, ವಕ್ರರೇಖೆ, ಸರಳರೇಖೆ ಇತ್ಯಾದಿ ಇಪ್ಪತ್ತೆರಡು ರೇಖಾಗಣಿತದ ಸಂಕೇತಗಳನ್ನು ಕಾವ್ಯದೊಳಗೆ ತಂದು ಹೆಣ್ಣಿನ ಚಿತ್ರವೊಂದನ್ನು ಕಟ್ಟಿಕೊಟ್ಟಿರುವ ಅವರ ಪ್ರತಿಭೆಗೆ ಸಲಾಂ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕವಿ, ಜಾನಪದ ತಜ್ಞ ಡಾ. ಎಂ. ಬೈರೇಗೌಡ ಪದಗಳೊಡನೆ ಆಟವಾಡುತ್ತ ಕಾವ್ಯ ಕಟ್ಟುತ್ತಿದ್ದ ಪೂರ್ವಸೂರಿಗಳನ್ನು ನೆನೆಸಿಕೊಳ್ಳಬೇಕಿದೆ. ಅವರ ಕಾವ್ಯಗಳನ್ನು ಓದಿ ಮನನ ಮಾಡಿಕೊಂಡು ತಮ್ಮ ಕವಿತೆಗಳು ಹೇಗಿರಬೇಕೆಂಬ ನಿಲುವಿಗೆ ಬರಬೇಕಾಗುತ್ತದೆ. ಪ್ರಾಸಕ್ಕಾಗಿ ತ್ರಾಸಪಡದೆ ಅದರ ಬಳಕೆ ಹೇಗಿರಬೇಕೆಂದರೆ `ದುಶ್ಯಂತನ ಬರವಿಗೆ ಆಮೇಲಿನ ಮರವಿಗೆ ಕಾದು ಕುಂತಳೆ ನಿಂತಳೆ ಶಕುಂತಳೆ’ ಎಂಬ ವೈ.ಎನ್.ಕೆ. ಅವರ ಸಾಲುಗಳನ್ನು ಉಲ್ಲೇಖಿಸಿ ಇಡೀ ಪುರಾಣದ ಕತೆ, ಸ್ತಿçà ಸಂವೇದನೆಗಳನ್ನು ಅಡಕಗೊಳಸಿದ ಈ ಬಗೆಯ ಕಾವ್ಯ ಬರುತ್ತಿದೆಯೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆದರೆ ಅಂತಹ ಗಟ್ಟಿ ಕಾವ್ಯ ಗಟ್ಟಿಗುಂದ ಮಹದೇವ್ ಅವರಿಂದ ರಚಿತವಾದ ಕಾವ್ಯಕೃತಿ ಮಿಥುನ ಪಕ್ಷಿಗಳಲ್ಲಿದೆ ಎಂದರು.
ಕೃತಿ ಪರಿಚಯಿಸಿದ ಯುವಕವಿ ಅರುಣ್ ಕವಣಾಪುರ ಶೀಲ-ಅಶ್ಲೀಲದ ಹಂಗು ತೊರೆದು ಹೆಣ್ಣಿನ ದೇಹಭಾಗದ ಎಲ್ಲ ವಿವರಗಳನ್ನು ಹದನಾಗಿ ಬೆರೆಸಿ, ಧ್ಯಾನಸ್ಥ ಸ್ಥಿತಿ ಮತ್ತು ತಾಧಾತ್ಮö್ಯತೆಯನ್ನು ಮಿಳಿತಗೊಳಿಸಿ ಹದನಾಗಿ ಭಟ್ಟಿ ಇಳಿಸಿಟ್ಟಿದ್ದಾರೆ ತಮ್ಮ ಪ್ರತೀ ಕಾವ್ಯದಲ್ಲಿ ಎಂದು ಉದಾಹರಣೆಗಳ ಸಹಿತ ವಿವರಿಸಿದರು.
ಕವಿ ಜಿ.ಡಿ. ಮಹದೇವ್ ಗಟ್ಟಿಗುಂದ ಮಾತನಾಡಿ ನಾನು ಹೆಚ್ಚು ಓದಿಕೊಂಡವನಲ್ಲ; ಯಾವುದೋ ಘಳಿಗೆಯಲ್ಲಿ ಉಂಟಾಗುವ ನನ್ನೊಳಗಿನ ತುಮುಲಗಳಿಗೆ ಪದಗಳ ಮಾಲೆ ಕಟ್ಟುತ್ತೇನೆ. ಅದು ಕಾವ್ಯವೆಂದು ಪರಿಗಣಿತವಾಗಿ ಈ ಬಗೆಯ ವಿಶ್ಲೇಷಣೆ, ಮೆಚ್ಚುಗೆಗೆ ಒಳಗಾಗುತ್ತದೆ ಎಂಬ ಯಾವ ಪರಿಕಲ್ಪನೆಯೂ ಇರುವುದಿಲ್ಲ ಎಂದು ನಿರ್ಲಿಪ್ತರಾಗಿ ಹೇಳಿದರು.
ಪುಟಾಣಿಗಳಾದ ಧೀಕ್ಷಾ, ದೀಪ್ತಿ ಪೊನ್ನಾಚಿ ಅವರ ಶಿವತಾಂಡವ ನೃತ್ಯ ಗಮನ ಸೆಳೆಯಿತು. ಗಾಯಕರಾದ ಚಂದ್ರಾಜ್, ಶಿವವೆಂಕಟಯ್ಯ, ಹೊಳಸಾಲಯ್ಯ ಅವರುಗಳು ಮಹದೇವು ಅವರ ರಚನೆಗಳಿಗೆ ಸಂಗೀತ ಸಂಯೋಜಿಸಿ ಹಾಡಿದರು.
ಆರ್.ಇ.ಎಸ್. ಆಡಳಿತ ಮಂಡಳಿ ಅಧ್ಯಕ್ಷ ಎಚ್.ಸಿ. ಶ್ರೀಕಂಠಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೀರಣಗೆರೆ ಜಗದೀಶ್, ಕತೆಗಾರ ಸ್ವಾಮಿ ಪೊನ್ನಾಚಿ, ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ನಾಗೇಶ್, ಮಾಜಿ ಅಧ್ಯಕ್ಷ ಬಿ.ಟಿ. ಚಿಕ್ಕಪುಟ್ಟೆಗೌಡ, ಉಪಸ್ಥಿತರಿದ್ದರು. ಉಪನ್ಯಾಸಕ ತುಳಸಿರಾಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕಿನ ವಿವಿಧ ಕ್ಷೇತ್ರದ ಹತ್ತುಮಂದಿ ಸಾಧಕರುಗಳಿಗೆ ಗೌರವ ಸಮರ್ಪಣೆ ನೆರವೇರಿತು.