ವಿಧಾನ ಪರಿಷತ್ ಸದಸ್ಯರಾಗಿರುವ ರವಿಕುಮಾರ್ ಎನ್ ರವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ ಶಾಲಿನಿ ರಜನೀಶ್ ಐ.ಎ.ಎಸ್, ಕರ್ನಾಟಕ ಸರ್ಕಾರ ಇವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ವಿವಿಧ ವಾರ್ತಾ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಬಿತ್ತರಿಸುವುದನ್ನು ಗಮನಿಸಲಾಗಿದೆ. ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಾಗಿ ಮುಖ್ಯ ಕಾರ್ಯದರ್ಶಿ ಅವರು ಜವಾಬ್ದಾರಿಯುತ ಮತ್ತು ಗೌರಯುತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ ರಾಜ್ಯ ಸಚಿವ ಸಂಪುಟಕ್ಕೆ ಪದನಿಮಿತ್ತ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ. ಹಾಗೆಯೇ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೂ ಮುಖ್ಯಸ್ಥರಾಗಿರುತ್ತಾರೆ. ಶಾಲಿನಿ ರಜನೀಶ್ ರವರು ಒಬ್ಬ ಘನತವೆತ್ತ ಮಹಿಳೆಯಾಗಿ ಎಲ್ಲ ಮಹಿಳೆಯರಿಗೆ ಆದರ್ಶ ಪ್ರಾಯವಾಗಿರುತ್ತಾರೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮಾಡಿರುವ ಈ ರೀತಿಯ ಅವಮಾನ ಸಮಸ್ತ ಸರಕಾರಿ ನೌಕರರಿಗೆ ಹಾಗೂ ಸಮಸ್ತ ಮಹಿಳಾ ಸಮಾಜಕ್ಕೆ ಆಗಿರುವ ಅವಮಾನ ಎಂದು ಸಚಿವಾಲಯ ನೌಕರರ ಸಂಘವು ಭಾವಿಸಿ, ಮಾನ್ಯ ಸಿಎನ್ ರವಿಕುಮಾರ್ ಅವರ ಈ ಕೃತ್ಯವನ್ನು ಖಂಡಿಸುತ್ತದೆ. ಮಾನ್ಯ ರವಿಕುಮಾರ್ ಎನ್ ರವರು ಕೂಡಲೇ ಈ ಕುರಿತು ಮಾನ್ಯ ಮುಖ್ಯ ಕಾರ್ಯದರ್ಶಿಯವರಲ್ಲಿ ಕ್ಷಮೆ ಯಾಚಿಸುವಂತೆ ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘವು ಆಗ್ರಹಿಸುತ್ತದೆ.
ಇನ್ನು ಮುಂದೆ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದ ಯಾವುದೇ ಜನ ಪ್ರತಿನಿಧಿಗಳು ಅಸಂವಿಧಾನಿಕ ಪದಗಳಿಂದ/ ಅವಹೇಳನಕಾರಿಯಾಗಿ ಮಾತನಾಡದಂತೆ ಸರ್ಕಾರದಲ್ಲಿ ನಿಯಮಗಳನ್ನು ರೂಪಿಸಬೇಕಾಗಿದೆ ಮತ್ತು ಈ ರೀತಿಯ ಕೃತ್ಯಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಸರ್ಕಾರಕ್ಕೆ ಬೇಡಿಕೆಯನ್ನು ಮಂಡಿಸುತ್ತಾ ಈ ಕೃತ್ಯವನ್ನು ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘ ಉಗ್ರವಾಗಿ ಖಂಡಿಸುತ್ತದೆ. ಮತ್ತು ಪ್ರತಿರೋಧ ವ್ಯಕ್ತಪಡಿಸುತ್ತದೆ.