- ಬೆಂಗಳೂರಿನ ಆರ್.ವಿ. ಕಾಲೇಜ್ ಗೆ ಪ್ರಥಮ ಬಹುಮಾನ
ಬೆಂಗಳೂರು,ಆ.24; ನ್ಯಾಷನಲ್ ಎಜುಕೇಶನಲ್ ಟ್ರಸ್ಟ್ ಆಫ್ ಕರ್ನಾಟಕದ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಇಂಪೋರ್ಟ್ ಹ್ಯಾಕ್ ಅಕಾಡೆಮಿಯಾ ಹ್ಯಾಕಥಾನ್ ಯಶಸ್ವಿಯಾಗಿದ್ದು, ಬೆಂಗಳೂರಿನ ಆರ್.ವಿ. ಕಾಲೇಜ್ ಗೆ ಮೊದಲ ಸ್ಥಾನ ದೊರೆತಿದೆ.
ನ್ಯಾಷನಲ್ “ಕಾಲೇಜಿನ ಐಟಿ ಕ್ಲಬ್ ಆಲ್ಗೋಜೆನ್ಜ್” ನಿಂದ ಎನ್ಸಿಜೆ ಕ್ಯಾಂಪಸ್ನ ಮಲ್ಟಿಮೀಡಿಯಾ ಹಾಲ್ನಲ್ಲಿ ನಡೆದ ಹ್ಯಾಕಥಾನ್ ಗೆ ಅಭೂತ ಪೂರ್ವ ಬೆಂಬಲ ದೊರೆತಿದ್ದು, ಬೆಂಗಳೂರಿನ ಆರ್.ವಿ. ಕಾಲೇಜ್ ವಿದ್ಯಾರ್ಥಿಗಳು 25 ಸಾವಿರ ರೂ ನಗದು ಬಹುಮಾನವನ್ನು ತನ್ನದಾಗಿಸಿಕೊಂಡರು.
ವಿದ್ಯಾರ್ಥಿಗಳ ನಾವೀನ್ಯತೆಗೆ ಸವಾಲೊಡ್ಡುವ ಹ್ಯಾಕಥಾನ್ ನಲ್ಲಿ ವಿದ್ಯಾರ್ಥಿ ಸಮೂಹ ತನ್ನದೇ ಆದ ರೀತಿಯಲ್ಲಿ ವಿವಿಧ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಿದರು. ಜಗತ್ತಿನ ಅತ್ಯಂತ ಬುದ್ದಿವಂತ ವಿದ್ಯಾರ್ಥಿ ಸಮೂಹ ಪರಸ್ಪರ ಸಮಾಲೋಚನೆಯಲ್ಲಿ ತೊಡಗಿ ವಿಚಾರ ವಿನಿಮಯ ನಡೆಸಿತು. ನೈಜ ಜ್ವಲಂತ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ದೊರಕಿಸಿಕೊಡುವ ಕುರಿತು ಚಿಂತನ – ಮಂಥನ ನಡೆಸಿತು.
ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಅಧ್ಯಕ್ಷ ಡಾ. ಎಚ್. ಎನ್. ಸುಬ್ರಹ್ಮಣ್ಯ, ಉದ್ಯಮಿ ಮತ್ತು ಮಾರ್ಗದರ್ಶಕರಾದ ಸುರೇಶ್ ನರಸಿಂಹ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರ ಅನನ್ಯ ಪ್ರತಿಭೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಗೌರವ ಕಾರ್ಯದರ್ಶಿ ವಿ. ವೆಂಕಟ ಶಿವಾ ರೆಡ್ಡಿ ಮಾತನಾಡಿ, ಇತ್ತೀಚೆಗೆ ನಡೆದ ಅತಿದೊಡ್ಡ ಹ್ಯಾಕಥಾನ್ ಇದಾಗಿದ್ದು, ವಿವಿಧ ರಾಜ್ಯಗಳ 38 ಕಾಲೇಜುಗಳಿಂದ 133 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೇರಳ, ಜಾರ್ಖಂಡ್, ದೆಹಲಿ, ಕೊಲ್ಕತ್ತಾ, ಮಹಾರಾಷ್ಟ್ರ ಮತ್ತಿತರೆ ರಾಜ್ಯಗಳಿಂದ ವಿದ್ಯಾರ್ಥಿಗಳು ಹ್ಯಾಕಥಾನ್ ನಲ್ಲಿ ಪಾಲ್ಗೊಂಡಿದ್ದು, ಅಪ್ ಗಳನ್ನು ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಿದರು. ವಿನೂತನ ವರದಿ ಸಿದ್ಧಪಡಿಸುವ, ಕೆಲಸದಲ್ಲಿ ಬದ್ಧತೆ, ಸಂಶೋಧನೆಯಲ್ಲಿ ಆಸಕ್ತಿ ಇರುವುದನ್ನು ವಿದ್ಯಾರ್ಥಿಗಳು ಸಾದರಪಡಿಸಿರುವುದಾಗಿ ತಿಳಿಸಿದರು.
ಜಯನಗರ ನ್ಯಾಷನಲ್ ಕಾಲೇಜ್ ಅಧ್ಯಕ್ಷ ಡಾ.ಪಿ.ಎಲ್. ವೆಂಕಟರಾಮ ರೆಡ್ಡಿ, ಎನ್ಸಿಜೆ ಪ್ರಾಚಾರ್ಯರಾದ ಡಾ. ಸಿ. ವಿಜಯಲಕ್ಷ್ಮಿ, ಎನ್.ಸಿ.ಜೆ ಉಪಾಧ್ಯಕ್ಷರಾದ ಪ್ರೊ. ಚೆಲುವಪ್ಪ ಎಸ್, ಕಂಪ್ಯೂಟರ್ ಸೈನ್ಸ್ ವಿಭಾದ ಪ್ರಾಧ್ಯಾಪಕರಾದ ಪ್ರೊ. ಆಶಾ ಟಿ.ಎಸ್ ಮತ್ತಿತರರು ಉಪಸ್ಥಿತರಿದ್ದರು.