ಬೆಂಗಳೂರು, ಆಗಸ್ಟ್ 19, (ಕರ್ನಾಟಕ ವಾರ್ತೆ); ಕಲಬುರಗಿಯಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕಬ್ಬು ಅಭಿವೃದ್ಧಿ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆಯಲ್ಲಿ ನೂಲಿನಿಂದ ಸಿದ್ದ ಉಡುಪು ಉತ್ಪಾದನೆ ಹಂತದವರೆಗೆ ಉದ್ಯಮಗಳು ಇರಲಿವೆ. ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಮೂಲ ಸೌಕರ್ಯ ನಿರ್ಮಿಸಲು ರೂ 390 ಕೋಟಿ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.
ಕಲಬುರಗಿ ತಾಲೂಕಿನ ನದಿ ಸಿನ್ನೂರು, ಕಿರಣಗಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ವಿವಿಧ ಸರ್ವೆ ನಂಬರ್ಗಳ ಒಟ್ಟು ಒಂದು ಸಾವಿರ ಎಕರೆ ಭೂಮಿಯನ್ನು ಪಿಎಂ ಮಿತ್ರ ಪಾರ್ಕ್ ಕರ್ನಾಟಕ ಲಿಮಿಟೆಡ್ಗೆ 99 ವರ್ಷಗಳ ಅವಧಿಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿಸಿದರು.