ಬೆಂಗಳೂರು,23 ಅಕ್ಟೋಬರ್ 2025: ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಿನ ಆಟೊ ಮತ್ತು ಕ್ಯಾಬ್ ಚಾಲಕ ಸಂಘಟನೆಗಳಿಗೆ ಸೇರಿದ 10,000ಕ್ಕೂ ಹೆಚ್ಚು ಚಾಲಕರು ಸಂಚಾರ ಕ್ಷೇತ್ರದಲ್ಲಿ ʼಸ್ಥಳೀಯ ಆ್ಯಪ್ʼಗಳನ್ನು ಬೆಂಬಲಿಸುವ (ವೋಕಲ್ ಫಾರ್ ಲೋಕಲ್) ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಾಲಕರು ತಮ್ಮ ಅನುಭವಗಳನ್ನು ಹಂಚಿಕೊಂಡು, ಆಟೊ ಮತ್ತು ಕ್ಯಾಬ್ಗಳ ಬಾಡಿಗೆ ಸೇವೆ ಪಡೆಯಲು ಪ್ರಯಾಣಿಕರಿಗೆ ಅಂತರ್ಜಾಲದಲ್ಲಿ ವ್ಯವಸ್ಥಿತವಾಗಿ ಮಾಹಿತಿ ನೀಡುವ ಬಹುರಾಷ್ಟ್ರೀಯ ಆನ್ಲೈನ್ ತಾಣಗಳ ಸೇವೆಯಿಂದಾಗಿ ತಾವು ದಿನನಿತ್ಯ ಎದುರಿಸುತ್ತಿರುವ ಸಂಕಷ್ಟಗಳನ್ನು ಹಂಚಿಕೊಂಡರು.
ಆಟೊ ಮತ್ತು ಕ್ಯಾಬ್ಗಳ ಬಾಡಿಗೆ ಸೇವೆ ಪಡೆಯಲು ಪ್ರಯಾಣಿಕರಿಗೆ ಅಂತರ್ಜಾಲದಲ್ಲಿ ವ್ಯವಸ್ಥಿತವಾಗಿ ಮಾಹಿತಿ ನೀಡುವ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಆ್ಯಪ್ಗಳನ್ನು ಬೆಂಬಲಿಸುವ ಉಪಕ್ರಮದ ಮೂಲಕ, ಆಟೊ ಮತ್ತು ಕ್ಯಾಬ್ ಚಾಲಕರು ಸ್ಥಳೀಯ, ನ್ಯಾಯೋಚಿತ ಮತ್ತು ಸಮುದಾಯ-ಚಾಲಿತ ಅಪ್ಲಿಕೇಷನ್ಗಳ ಬಳಕೆಗೆ ಉತ್ತೇಜನ ನೀಡಲು ಮುಂದೆ ಬಂದಿದ್ದಾರೆ. ಈ ಸ್ಥಳೀಯ ವೇದಿಕೆಗಳು ಚಾಲಕರು ಉತ್ತಮ ಮೊತ್ತ ಗಳಿಸಲು, ಪಾರದರ್ಶಕವಾಗಿ ಕೆಲಸ ಮಾಡಲು ಮತ್ತು ಸ್ವತಂತ್ರವಾಗಿ ಉಳಿಯಲು ಸಹಾಯ ಮಾಡುತ್ತಿವೆ. ನ್ಯಾಯೋಚಿತ ಗಳಿಕೆಯು ಚಾಲಕರು ತಮ್ಮ ವಾಹನಗಳನ್ನು ಸಮರ್ಪಕವಾಗಿ ನಿರ್ವಹಿಸಲು, ಉತ್ತಮ ಸೇವೆ ಒದಗಿಸಲು ಮತ್ತು ಪ್ರಯಾಣಿಕರಿಗೆ ದರಗಳನ್ನು ಸ್ಥಿರವಾಗಿ ಇರಿಸಲು ಅವಕಾಶ ಮಾಡಿಕೊಟ್ಟಿವೆ.
ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ಮಂಜುನಾಥ್ ಅವರು ಮಾತನಾಡಿ, ʼಕರ್ನಾಟಕದಾದ್ಯಂತ ಇರುವ ಎಲ್ಲಾ ಸಂಘ ಸಂಸ್ಥೆಗಳು ಜೊತೆಗೂಡಿ ಚಾಲಕರ ಮತ್ತು ಪ್ರಯಾಣಿಕರ ಸ್ನೇಹಿ ಇರುವ ʼನಮ್ಮ ಯಾತ್ರಿʼ ಆ್ಯಪ್ ಬಳಸಲು ನಿರ್ಧರಿಸಿವೆ. ವಿದೇಶಿ ಕಂಪನಿಗಳ ಆ್ಯಪ್ಗಳು ಚಾಲಕರಿಗೆ ಮಾರಕವಾಗಿರುವುದರಿಂದ ಅಂತಹ ಆ್ಯಪ್ ಬಳಸುವುದನ್ನು ನಿಲ್ಲಿಸಿ ʼ ನಮ್ಮ ಯಾತ್ರಿʼ ಆ್ಯಪ್ ಅನ್ನು ಎಲ್ಲಾ ಆಟೊ ಹಾಗೂ ಕ್ಯಾಬ್ ಚಾಲಕರು ಬಳಸಬೇಕೆಂದು ಮನವಿ ಮಾಡಿಕೊಂಡರು.
"ದೊಡ್ಡ ಅಪ್ಲಿಕೇಷನ್ಗಳು ಭರವಸೆಗಳೊಂದಿಗೆ ನಮ್ಮನ್ನು ಆಕರ್ಷಿಸುತ್ತವೆ, ಆದರೆ, ದಿನಗಳು ಕಳೆದಂತೆ ನಮ್ಮ ಗಳಿಕೆ ಕಡಿಮೆಯಾಗುತ್ತ ಹೋಗುತ್ತದೆ. ದೊಡ್ಡ ಕಂಪನಿಗಳ ಬಳಿ ಚಾಲಕರ ದೀರ್ಘಾವಧಿಯ ಕಲ್ಯಾಣ ಕಾರ್ಯಕ್ರಮಗಳು ಇಲ್ಲ. ಅಪಘಾತ ಸಂಭವಿಸಿದಾಗ ಇಲ್ಲವೇ ಯಾವುದಾದರೂ ವಿವಾದ ಉದ್ಭವಿಸಿದಾಗ ಇಂತಹ ಕಂಪನಿಗಳಿಂದ ನಮಗೆ ಯಾವುದೇ ನೆರವು ದೊರೆಯುವುದಿಲ್ಲ. ನಾವೇ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ" ಎಂದೂ ಅವರು ಹೇಳಿದರು.
ಪೀಸ್ ಆಟೊ (Peace Auto) ಮುಖ್ಯಸ್ಥ ರಘು ಅವರು ಮಾತನಾಡಿ, ʼಕಾನೂನಿನಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿರುವುದಿಲ್ಲ. ಹೀಗಾಗಿ ಕಾನೂನಿನ ವಿರುದ್ದ ತಾವು ಹೋಗುವುದಿಲ್ಲ ಎಂದು ʼನಮ್ಮ ಯಾತ್ರಿʼ ಆ್ಯಪ್ನವರು ಚಾಲಕರಿಗೆ ಭರವಸೆ ನೀಡಿದ್ದಾರೆ. ನಾವು ಎಂದಿಗೂ ಬೈಕ್ ಟ್ಯಾಕ್ಸಿಗೆ ಅವಕಾಶ ನೀಡುವುದಿಲ್ಲ. ನಾವು ಯಾವಾಗಲು ಆಟೊ ಚಾಲಕರ ಪರವಾಗಿರುತ್ತೇವೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ನಮ್ಮ ಸಂಘದ ಎಲ್ಲ ಚಾಲಕರು ʼನಮ್ಮ ಯಾತ್ರಿʼ ಜೊತೆಗೆ ನಿಲ್ಲುತೇವೆ ಎಂದು ಹೇಳಿದರು.
"ಕೆಲವು ದಿನಗಳಲ್ಲಿ, ನಮ್ಮ ಚಾಲಕರು 12 ರಿಂದ 14 ಗಂಟೆಗಳ ಕಾಲ ವಾಹನ ಚಲಾಯಿಸುತ್ತಾರೆ. ಆದರೂ ಕುಟುಂಬಗಳನ್ನು ಸಲಹುವುದಕ್ಕೆ ಸಾಕಾಗುವಷ್ಟು ಆದಾಯ ಸಂಪಾದಿಸಲು ಪರಿಶ್ರಮಪಡುತ್ತಲೇ ಇರುತ್ತಾರೆ. ಪ್ರೋತ್ಸಾಹ ಧನದ ಮೊತ್ತ ಬದಲಾಗುತ್ತಲೇ ಇರುತ್ತದೆ. ಜೊತೆಗೆ ಇತರ ಕೆಲ ನಿಯಮಗಳೂ ಬದಲಾಗುತ್ತಲೇ ಇರುತ್ತವೆ. ಇಂತಹ ಬದಲಾವಣೆಗಳಿಗೆ ನಮ್ಮ ಆತಂಕ ವ್ಯಕ್ತಪಡಿಸಿದಾಗ ಅವುಗಳಿಗೆ ಯಾರೊಬ್ಬರೂ ಕಿವಿಗೊಡುವುದಿಲ್ಲ. ನಮ್ಮ ದುಡಿಮೆಗೆ ಬೆಲೆಯೇ ಇಲ್ಲ ಎಂದು ಭಾಸವಾಗುತ್ತದೆ. ಓಲಾ ಮತ್ತು ಉಬರ್ನಂತಹ ದೊಡ್ಡ ಅಪ್ಲಿಕೇಷನ್ಗಳು (ಆ್ಯಪ್) ದಿನೇ ದಿನೇ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಲೇ ಇವೆ. ಚಾಲಕರು ಗಳಿಸುವ ಆದಾಯವನ್ನು ಕಡಿಮೆ ಮಾಡುತ್ತಲೇ ಇವೆ. ನಮ್ಮ ಕಠಿಣ ಪರಿಶ್ರಮ ಗೌರವಿಸುವ ಮತ್ತು ನಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಅವಕಾಶ ನೀಡುವ ನ್ಯಾಯೋಚಿತ ವ್ಯವಸ್ಥೆಯನ್ನು ನಾವು ಬಯಸುತ್ತೇವೆ" ಎಂದು ಹೇಳಿದರು.
ʼವಿದೇಶಿ ಅಪ್ಲಿಕೇಷನ್ಗಳು (ಆ್ಯಪ್) ಸಾಮಾನ್ಯವಾಗಿ ಆರಂಭದಲ್ಲಿ ದೊಡ್ಡ ಪ್ರೋತ್ಸಾಹದೊಂದಿಗೆ ಚಾಲಕರನ್ನು ಆಕರ್ಷಿಸುತ್ತವೆ. ಆದರೆ, ಕಾಲಾನಂತರದಲ್ಲಿ, ಆದಾಯ ಕಡಿಮೆಯಾಗುತ್ತ ಹೋಗುತ್ತದೆ. ಇಂತಹ ಆ್ಯಪ್ಗಳಿಂದ ದೀರ್ಘಾವಧಿಯಲ್ಲಿ ಚಾಲಕರ ಕಲ್ಯಾಣ ಆಗುವ ಸಾಧ್ಯತೆಗಳು ಇಲ್ಲದಿರುವುದರ ಮೇಲೆ ಚಾಲಕರ ಸಂಘಗಳು ಬೆಳಕು ಚೆಲ್ಲಿದವು.
ಪ್ರಯಾಣಿಕರು ಆಟೊ ಹಾಗೂ ಕ್ಯಾಬ್ಗಳ ಬಾಡಿಗೆ ಸೇವೆ ಪಡೆಯಲು ನೆರವಾಗುವ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಅಪ್ಲಿಕೇಷನ್ಗಳು (ಆ್ಯಪ್) ಚಾಲಕರ ದೈನಂದಿನ ವಾಸ್ತವ ಅಗತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿವೆ. ನ್ಯಾಯೋಚಿತ ನೀತಿಗಳನ್ನು ಪರಿಚಯಿಸುತ್ತವೆ. ಚಾಲಕರ ಪ್ರತಿಕ್ರಿಯೆಗೆ ಸ್ಪಂದಿಸುತ್ತವೆ. ಸ್ಥಳೀಯ ಅಪ್ಲಿಕೇಷನ್ಗಳನ್ನು ಬೆಂಬಲಿಸುವುದರಿಂದ ಗಳಿಕೆಯು ಸ್ಥಳೀಯ ಆರ್ಥಿಕತೆಯೊಳಗೆ ಉಳಿದುಕೊಳ್ಳಲಿದೆ. ಇದು ಬೆಂಗಳೂರಿನ ವಾಹನ ಸಂಚಾರ ವ್ಯವಸ್ಥೆಯನ್ನೂ ಬಲಪಡಿಸಲಿದೆ.
ಚಾಲಕರ ಸಂಘಗಳ ಮುಖಂಡರಾದ ಪೀಸ್ ಆಟೊ-ದ ರಘು, ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಮಂಜುನಾಥ್ ಮತ್ತು ಕೆಎ43 ಕನ್ನಡ ಚಾಲಕರ ಸಂಘದ ಟೋನಿ, ತುಮಕೂರು ಆಟೊ ಸಂಘದ ಅಧ್ಯಕ್ಷ ಮಂಜುನಾಥ್ ಎಸ್., ಡಾ. ಬಿ. ಆರ್. ಅಂಬೇಡ್ಕರ್ ಉತ್ತರ ಕರ್ನಾಟಕ ಆಟೊ ಚಾಲಕರ ಹಾಗೂ ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಬೂದುರ, ಮಂಗಳೂರು ಆಟೊ ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಜಬ್ಬಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಕರ್ನಾಟಕದಾದ್ಯಂತದ ವಿವಿಧ ಚಾಲಕರ ಸಂಘಗಳ ಪ್ರತಿನಿಧಿಗಳೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನ್ಯಾಯೋಚಿತ ಕಮಿಷನ್-ಮುಕ್ತ ವೇದಿಕೆಗಳ ಅಗತ್ಯ, ಮುಕ್ತ ಸಂಚಾರ ಯೋಜನೆಗಳ ಯಶೋಗಾಥೆಗಳು ಮತ್ತು ಸ್ಥಳೀಯ ಸಂಚಾರ ಪರಿಹಾರಗಳನ್ನು ಬೆಂಬಲಿಸುವಲ್ಲಿ ಸರ್ಕಾರ ಮತ್ತು ನಾಗರಿಕರು ನಿರ್ವಹಿಸುವ ಮಹತ್ವದ ಪಾತ್ರದ ಬಗ್ಗೆ ಸುದ್ದಿಗೋಷ್ಠಿಯು ಕೇಂದ್ರೀಕೃತಗೊಂಡಿತ್ತು. ಸ್ಥಳೀಯ ಸಂಚಾರ ಸೌಲಭ್ಯಕ್ಕೆ ಪೂರಕವಾಗಿರುವ ಸ್ಥಳೀಯ ಆಪ್ಗಳ ಬಳಕೆ ಉತ್ತೇಜಿಸುವ ಮನೋಭಾವವನ್ನು ಎಲ್ಲರೂ ಅಳವಡಿಸಿಕೊಳ್ಳಲು ಒಗ್ಗಟ್ಟಿನ ಕರೆಯಾಗಿಯೂ ಕಾರ್ಯನಿರ್ವಹಿಸಿತು.