ದಿನಾಂಕ: ಡಿ. 28, ಶನಿವಾರ
ಸಮಯ: ಬೆಳಿಗ್ಗೆ 9.30
ಸ್ಥಳ: ಯುವಪಥ – ವಿವೇಕ ಆಡಿಟೋರಿಯಂ,ಜಯನಗರ 4ನೇ ಬ್ಲಾಕ್, ಬೆಂಗಳೂರು
ಪುರಸ್ಕಾರದಲ್ಲಿ: ಅಭಿನಂದನಾ ಪತ್ರ, ಸ್ಮರಣಿಕೆ, ಫಲತಾಂಬೂಲ ಮತ್ತು ರೂ. 1 ಲಕ್ಷ ನಗದು
ಮುಖ್ಯ ಅತಿಥಿ: ಶ್ರೀ ಅಶೋಕ್ ಹಾರನಹಳ್ಳಿ (ಮಾಜಿ ಅಡ್ವೊಕೇಟ್ ಜನರಲ್, ಕರ್ನಾಟಕ)
ಸನಾತನ ಜ್ಞಾನ ಭಂಡಾರಿ
ಅಧ್ಯಾತ್ಮ ಲೋಕದ ಸವ್ಯಸಾಚಿ — ಶ್ರೀ ದುಷ್ಯಂತ್ ಶ್ರೀಧರ್
ಕೆಲವರು ಮಾತನಾಡುತ್ತಾರೆ; ಕೆಲವರು ಚಿಂತನೆ ಹುಟ್ಟಿಸುತ್ತಾರೆ. ಕೆಲವರು ಉಪನ್ಯಾಸ ಕೊಡುತ್ತಾರೆ; ಕೆಲವರು ಜೀವನದ ದಿಕ್ಕನ್ನೇ ಬದಲಿಸುತ್ತಾರೆ. ಶ್ರೀ ದುಷ್ಯಂತ್ ಶ್ರೀಧರ್ ಅವರು ಈ ಎರಡನೆಯ ವರ್ಗಕ್ಕೆ ಸೇರಿದವರು. ಸನಾತನ ಧರ್ಮದ ಗಹನ ತತ್ವಗಳನ್ನು ಸಮಕಾಲೀನ ಬದುಕಿನ ಸ್ಪರ್ಶದೊಂದಿಗೆ ಅನಾವರಣಗೊಳಿಸುವ ಅಪರೂಪದ ವಾಗ್ಮಿ.
ಕುಂಭಕೋಣಂನ ಆರ್ಷ ಸಂಸ್ಕೃತಿಯ ಶ್ರೀವೈಷ್ಣವ ಕುಟುಂಬದ ಸಂಸ್ಕಾರಗಳಲ್ಲಿ ಬೆಳೆದ ಅವರು, ೧೯ ಸೆಪ್ಟೆಂಬರ್ ೧೯೮೬ರಂದು ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಸಂಸ್ಕೃತ, ಪುರಾಣ, ದಿವ್ಯಪ್ರಬಂಧ ಮತ್ತು ವೇದಾಂತ ಚಿಂತನೆಗಳತ್ತ ಅವರ ಮನಸ್ಸು ಸ್ವಾಭಾವಿಕವಾಗಿ ತಿರುಗಿತು. ‘ಜನನಿಯೇ ಮೊದಲ ಗುರು’ ಎಂಬ ಮಾತಿಗೆ ಸಾಕ್ಷಿಯಾಗಿ, ಮಾತೃಶ್ರೀ ಅವರ ಪ್ರೇರಣೆಯಿಂದ ಐದು ವರ್ಷದಲ್ಲಿಯೇ ‘ದಯಾಶತಕಮ್’ ಕಂಠಪಾಠ, ಭಗವದ್ಗೀತೆಯ ಅಧ್ಯಯನ—ಇವೆಲ್ಲವೂ ಅವರ ಆಧ್ಯಾತ್ಮಿಕ ಬೀಜಾಂಕುರಗಳಾದವು.
ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಪಿಲಾನಿ)ನಲ್ಲಿ ಸಂಯೋಜಿತ ರಾಸಾಯನಿಕ ಇಂಜಿನಿಯರಿಂಗ್ ಮತ್ತು ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ಒಂದು ದಶಕ ಕಾಲ ಕಾರ್ಪೊರೇಟ್ ವಲಯದಲ್ಲಿ ಕಾರ್ಯನಿರತರಾಗಿದ್ದರು.ಆದರೆ ಮುಂಬೈನಲ್ಲಿ ನಡೆದ ೩೬ ಗಂಟೆಗಳ ರಾಮಾಯಣ ಉಪನ್ಯಾಸ ಸರಣಿ ಅವರ ಬದುಕಿನ ತಿರುವು. ಆ ನಂತರ ವೃತ್ತಿಯ ಬಂಧನವನ್ನು ಕಳಚಿ, ಅಧ್ಯಾತ್ಮ ಕ್ಷೇತ್ರವನ್ನೇ ಜೀವನ ಧರ್ಮವನ್ನಾಗಿ ಸ್ವೀಕರಿಸಿದರು.
ಶ್ರೀ ಅಹೋಬಿಲ ಮಠದ ಆಚಾರ್ಯರು ಹಾಗೂ ಖ್ಯಾತ ಯತಿವರ್ಯರ ಸಾನ್ನಿಧ್ಯದಲ್ಲಿ ವೇದಾಂತ ಅಧ್ಯಯನ ನಡೆಸಿದ ಅವರು, ತಮಿಳು, ಕನ್ನಡ, ತೆಲುಗು, ಸಂಸ್ಕೃತ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರವಚನ ನೀಡುವ ಬಹುಭಾಷಾ ಕೋವಿದ. ಗಹನ ತತ್ವಗಳನ್ನು ಸರಳವಾಗಿ, ಆದರೆ ತಾತ್ವಿಕ ಗಂಭೀರತೆಯನ್ನು ಕಳೆದುಕೊಳ್ಳದೆ ನಿರೂಪಿಸುವುದು ಅವರ ವಾಗ್ವೈಖರಿಯ ವಿಶೇಷ.
ಅಮೆರಿಕಾ, ಆಸ್ಟ್ರೇಲಿಯಾ, ಯೂರೋಪ್ ಸೇರಿದಂತೆ ೨೩ ದೇಶಗಳ ೧೨೫ಕ್ಕೂ ಹೆಚ್ಚು ನಗರಗಳಲ್ಲಿ ೩೫೦೦ಕ್ಕೂ ಮೀರಿದ ಪ್ರವಚನಗಳ ಮೂಲಕ ಅವರು ಭಾರತೀಯ ಧಾರ್ಮಿಕ ಪರಂಪರೆಯನ್ನು ಜಾಗತಿಕ ವೇದಿಕೆಗೆ ತಂದು ನಿಲ್ಲಿಸಿದ್ದಾರೆ. ಬರಹಗಾರರಾಗಿ ‘ThePeerles Poet and Preceptor’ ಮತ್ತು ‘ರಾಮಾಯಣಮ್’ ಕೃತಿಗಳ ಮೂಲಕ ಪುರಾಣ ಸಾಹಿತ್ಯಕ್ಕೆ ನವ್ಯ ದೃಷ್ಟಿ ನೀಡಿದ್ದಾರೆ .
ಸಂಸ್ಕೃತ ಭಾಷೆಯ ಸಂರಕ್ಷಣೆಗೆ ಸಮರ್ಪಿತ ಚಲನಚಿತ್ರ ‘ಶಾಕುಂತಲಾ’, ‘ವೇದಾಂತ ದೇಶಿಕ’ ಚಿತ್ರದಲ್ಲಿನ ಅಭಿನಯ, ‘ಪೆರಿಯವರ್’ವೆಬ್ಸರಣಿ ,ಹಾಗೂ ನೃತ್ಯರೂಪಕಗಳು ಸಂಗೀತ, ಕಲೆ ಮತ್ತು ವೇದಾಂತಗಳ ಸಮನ್ವಯದ ಜೀವಂತ ಉದಾಹರಣೆಗಳು.
ಹಿಂದೂ ದೇವಾಲಯಗಳ ಸ್ವಾತಂತ್ರ್ಯ, ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕಾಗಿ ‘ದೇಶಿಕ ದಯಾ’ ಟ್ರಸ್ಟ್ ಮೂಲಕ ನಡೆಸುತ್ತಿರುವ ಕಾರ್ಯಗಳು, ಅವರ ಅಧ್ಯಾತ್ಮ ಚಿಂತನೆಯ ಸಾಮಾಜಿಕ ಆಯಾಮವನ್ನು ಸ್ಪಷ್ಟಪಡಿಸುತ್ತವೆ.
ಈ ಎಲ್ಲ ಸಾಧನೆಗಳನ್ನು ಗೌರವಿಸಿ, ಸನಾತನ ಧರ್ಮ ಪರಂಪರೆಗೆ ಅನನ್ಯ ಕೊಡುಗೆ ನೀಡುತ್ತಿರುವ ಶ್ರೀ ದುಷ್ಯಂತ್ ಶ್ರೀಧರ್ ಅವರಿಗೆ‘ಪಾಂಚಜನ್ಯ ಪುರಸ್ಕಾರ ೨೦೨೫ ’ಪ್ರದಾನಿಸಿರುವುದು ಒಬ್ಬ ವ್ಯಕ್ತಿಗೆ ಸಲ್ಲಿಸಿದ ಗೌರವ ಮಾತ್ರವಲ್ಲ; ಒಂದು ಪರಂಪರೆಗೆ ಸಲ್ಲಿಸಿದ ಗೌರವ.