ಕೃಷಿ ವಿ.ವಿ. ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸಕಾರಾತ್ಮಕ ಸ್ಪಂದನೆ ರಾಜ್ಯಪಾಲರ ಭರವಸೆ

varthajala
0

ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಕಲ್ಯಾಣ ಸಂಘದ ಬೇಡಿಕೆಗಳನ್ನು ಪರಿಗಣಿಸಿ ,ಕಾನೂನು ಚೌಕಟ್ಟಿನಲ್ಲಿ ಅವುಗಳ ಪರಿಹಾರಕ್ಕೆ ಕ್ರಮವಹಿಸಲಾಗುವುದು.10 ರಿಂದ 12 ದಿನಗಳ ಅವಧಿಯಲ್ಲಿ  ಉನ್ನತ ಮಟ್ಟದ ಸಭೆ ನಡೆಸಿ ಈ ಕುರಿತು ಪರಿಹಾರಕ್ಕೆ ಸೂತ್ರ ಒದಗಿಸಲಾಗುವುದು ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ಶಿಕ್ಷಕರ ಕಲ್ಯಾಣ ಸಂಘ ನಡೆಸುತ್ತಿರುವ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿ, ಧರಣಿ ನಿರತರ ಬೇಡಿಕೆಗಳನ್ನು ಸಹಾನುಭೂತಿಯಿಂದ  ಆಲಿಸಿದ ಅವರು, 10 ರಿಂದ 12 ದಿನಗಳೊಳಗೆ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ,ಶಿಕ್ಷಕರ ಕಲ್ಯಾಣ ಸಂಘದ ಪ್ರತಿನಿಧಿಗಳು,ರಾಜ್ಯ ಸರ್ಕಾರ ಹಾಗೂ ಯುಜಿಸಿಯ ಅಧಿಕಾರಿಗಳ ಜಂಟಿ ಸಭೆ ಆಯೋಜಿಸಿ ,ಕಾನೂನು ಪರಿಧಿಯೊಳಗೆ ನಿಶ್ಚಿತವಾಗಿ ಈ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು , ಕಳೆದ ತಿಂಗಳು ವಿ.ವಿ.ಗೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಈ ಕುರಿತು ಮಾಹಿತಿ ನೀಡಿದ್ದರೆ ಈ ಹೊತ್ತಿಗೆ ಸಮಸ್ಯೆಗೆ ಪರಿಹಾರ ದೊರೆತಿರುತ್ತಿತ್ತು. ಸಂಘವು ತಕ್ಷಣ ಮುಷ್ಕರ ಕೈ ಬಿಡಬೇಕು, ಶಿಕ್ಷಕರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದನೆ ಸಿಗಲಿದೆ ಎಂದರು.


ಬಡ್ತಿ,ಜೇಷ್ಠತಾ ಪಟ್ಟಿ,ಪಿಂಚಣಿ, ಇತರೆ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಸಿದ ಸೇವೆ ಪರಿಗಣನೆ,ನಿವೃತ್ತಿ ವಯೋಮಿತಿ  ಏರಿಕೆ,ಜ್ಯೋತಿ ಸಂಜೀವಿನಿ ಯೋಜನೆ ವ್ಯಾಪ್ತಿಗೆ ಒಳಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಶಿಕ್ಷಕರ ಕಲ್ಯಾಣ ಸಂಘದ ಡಾ.ಐ.ಕೆ.ಕಾಳಪ್ಪನವರ,ಡಾ.ಮಹಾಂತೇಶ ನಾಯಕ,ಡಾ.ರಾಮನಗೌಡ ಪಾಟೀಲ ,ಡಾ.ಆರ್.ಹೆಚ್.ಪಾಟೀಲ ಮೊದಲಾದವರು ರಾಜ್ಯಪಾಲರಿಗೆ ಮನವಿ ಮಾಡಿದರು.

ರಾಜ್ಯಪಾಲರ ಭೇಟಿ ಮತ್ತು ಬೇಡಿಕೆಗಳ ಈಡೇರಿಕೆ ಕುರಿತ ಭರವಸೆಯನ್ನು ಗೌರವಿಸಿ ಶಿಕ್ಷಕರ ಕಲ್ಯಾಣ ಸಂಘದ ಸದಸ್ಯರು ಕಳೆದ ಅಕ್ಟೋಬರ್ 4 ರಿಂದ ನಡೆಸುತ್ತಿದ್ದ ಮುಷ್ಕರವನ್ನು ಹಿಂತೆಗೆದುಕೊಂಡಿದ್ದಾರೆ.
Tags

Post a Comment

0Comments

Post a Comment (0)