ಸುತ್ತೋಲೆ ರದ್ದು ಪಡಿಸಿ, ಪ್ರತ್ಯೇಕ ಪಿಯು ಶಿಕ್ಷಣ ಇಲಾಖೆ ಮುಂದುವರೆಸಲು ಬಿಜೆಪಿ ಆಗ್ರಹ

varthajala
0

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯ ನಿರ್ವಹಣೆಯನ್ನು ಆಯಾ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಹಾಗೂ ಆಯಾ ವಿಭಾಗದ ಸಂಬಂಧಪಟ್ಟ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ಮೇಲುಸ್ತುವಾಗಿ ಜವಾಬ್ದಾರಿ ಕೊಡಲಾಗಿದೆ. ಈ ಕುರಿತ ಸುತ್ತೋಲೆಯನ್ನು ರದ್ದು ಮಾಡಲು ಬಿಜೆಪಿ ಒತ್ತಾಯಿಸಿದೆ.

ನಗರದ ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರು ಅವರು, ರಾಜ್ಯದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿ ಹಲವಾರು ತಪ್ಪು ನಿರ್ಣಯಗಳನ್ನು ಕೈಗೊಂಡು ಶಿಕ್ಷಕ, ವಿದ್ಯಾರ್ಥಿ, ಪಾಲಕರ ಸಮುದಾಯದಲ್ಲಿ ಗೊಂದಲ ನಿರ್ಮಾಣಗೊಂಡಿದೆ. ಈ ಲೋಪದೋಷಗಳಿಗೆ ವಿರೋಧ ವ್ಯಕ್ತಪಡಿಸುವುದಾಗಿ ತಿಳಿಸಿದರು.

ಶಿಕ್ಷಣ ಇಲಾಖೆ ಸಚಿವರಾದ ಮಧು ಬಂಗಾರಪ್ಪನವರು ಪದವಿ ಪೂರ್ವ ಹಂತದ ಮೇಲುಸ್ತುವಾರಿಯ ಅಧಿಕಾರವನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಪರ ಆಯುಕ್ತರಿಗೆ ನೀಡಿ ಸುತ್ತೋಲೆ ಹೊರಡಿಸಿದ್ದಾರೆ. ಪಿಯು ಶಿಕ್ಷಣ ಮಹತ್ವದ ಕಾಲಘಟ್ಟ. ಗುಣಮಟ್ಟದ ಶಿಕ್ಷಣ ನೀಡಲು ಪ್ರತ್ಯೇಕ ಇಲಾಖೆ ಬೇಕೆಂದು ಈ ಹಿಂದೆ ಮಾನ್ಯ ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ಮತ್ತು ವೀರಪ್ಪ ಮೊಯಿಲಿ ಅವರು ಶಿಕ್ಷಣ ಸಚಿವರಾಗಿದ್ದಾಗ ನಿರ್ಧರಿಸಿ ಅನುಷ್ಠಾನಕ್ಕೆ ತಂದಿದ್ದರು. ಹಲವಾರು ಹೋರಾಟಗಳ ನಂತರ ಪ್ರತ್ಯೇಕ ಇಲಾಖೆ ಸ್ಥಾಪಿಸಲಾಗಿತ್ತು ಎಂದು ವಿವರಿಸಿದರು.

ಇದರಿಂದ ರಾಜ್ಯದ ಪಿಯು ಶಿಕ್ಷಣ ದೇಶಕ್ಕೇ ಮಾದರಿಯಾಗಿತ್ತು. ಇತರ ರಾಜ್ಯದವರು ಇಲ್ಲಿಗೆ ಬಂದು ಅಧ್ಯಯನ ಮಾಡಿ ನಮ್ಮ ಮಾದರಿಯನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು. ಆದರೆ, ಇವತ್ತು ನೂತನ ಸರಕಾರ ಬಂದ ಬಳಿಕ ಮಧು ಬಂಗಾರಪ್ಪನವರು ತಮ್ಮ ತಂದೆ ಕೈಗೊಂಡ ನಿರ್ಧಾರವನ್ನು ಬದಲಿಸಿದ್ದು ಖೇದಕರ ಎಂದು ತಿಳಿಸಿದರು.

ಹಲವಾರು ವರ್ಷಗಳ ಹೋರಾಟದ ಬಳಿಕ ಪ್ರತ್ಯೇಕ ಇಲಾಖೆ ರಚಿಸಿದ್ದರು. ಆದರೆ, ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ, ವಿಧಾನಪರಿಷತ್ ಸದಸ್ಯರ ಜೊತೆ ಚರ್ಚೆ ಮಾಡದೆ ಸಲಹೆಗಳನ್ನು ಪಡೆಯದೆ ಬದಲಾವಣೆ ಮಾಡಿದ್ದಾರೆ. ಏಕಾಏಕಿ ಸುತ್ತೋಲೆ ಹೊರಡಿಸಿದ್ದಾರೆ. ಈ ಸಂಬಂಧ ಸುತ್ತೋಲೆ ವಾಪಸ್ ಪಡೆಯಲು ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾಗಿ ವಿವರಿಸಿದರು. ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ, ವಿಧಾನಪರಿಷತ್ ಸದಸ್ಯರ ಜೊತೆ ಮಾಡಲು ಒತ್ತಾಯಿಸಲಾಗಿದೆ ಎಂದರು.

ರಾಜ್ಯದ ಅನುದಾನಿತ ಪ್ರಾಥಮಿಕ, ಪ್ರೌಢ ಮತ್ತಿತರ ಶಿಕ್ಷಣ ಸಂಸ್ಥೆಗಳ 2006ದ ನಂತರ ನೇಮಕ ಆದ ಶಿಕ್ಷಕರು, ಉಪನ್ಯಾಸಕರಿಗೆ ಪಿಂಚಣಿ ಇಲ್ಲ. ಸರಕಾರಿ ಶಿಕ್ಷಕರಿಗೆ ಎನ್‍ಪಿಎಸ್ ಇದೆ. ಅದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರವರ್ಗಕ್ಕೆ ವಿಸ್ತರಿಸುವುದಾಗಿ ಕಾಂಗ್ರೆಸ್ಸಿನವರು ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದರು. ಎನ್‍ಪಿಎಸ್ ರದ್ದು ಮಾಡಿ ಒಪಿಎಸ್ ನೀಡುವ ಕುರಿತು ಸಮಿತಿ ರಚಿಸಿದ್ದಾರೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಇದನ್ನು ಕೊಡುವ ಪ್ರಸ್ತಾವವೇ ಇಲ್ಲ. ಸರಕಾರವು ಈ ವಿಚಾರವನ್ನೂ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಮಧು ಬಂಗಾರಪ್ಪನವರು ವಾರ್ಷಿಕ ಪರೀಕ್ಷೆ ಬಳಿಕ ಎರಡು ಸಪ್ಲಿಮೆಂಟರಿ ಪರೀಕ್ಷ್ಷೆ ಮಾಡಲು ಸೂಚಿಸಿದ್ದಾರೆ. ಹಿಂದೆ ಒಂದು ಸಪ್ಲಿಮೆಂಟರಿ ಪರೀಕ್ಷೆ ನಡೆಯುತ್ತಿತ್ತು. 3 ಪರೀಕ್ಷೆಗಳು ಮುಗಿಯಲು ನವೆಂಬರ್ 10ರವರೆಗೆ ಅವಕಾಶ ಬೇಕು. ಇದರಿಂದ ಬೋಧನಾ ಅವಧಿಯೇ ಸಿಗುವುದಿಲ್ಲ. ಇದರಿಂದ ಶೇ 90 ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ ಎಂದು ಆಕ್ಷೇಪಿಸಿದರು. ಮೊದಲನೇ ಟರ್ಮ್ ಬರಿಯ ಪರೀಕ್ಷೆಯಲ್ಲೇ ಮುಗಿಯಲಿದೆ ಎಂದು ಆತಂಕ ಸೂಚಿಸಿದರು. ಇಂಥ ಮಹತ್ವದ ನಿರ್ಣಯ ಕೈಗೊಳ್ಳುವ ಮೊದಲು ಪ್ರಾಂಶುಪಾಲರು, ಉಪನ್ಯಾಸಕರು ಸೇರಿ ಮೇಲ್ಮನೆ ಸದಸ್ಯರ ಜೊತೆ ಚರ್ಚೆ ಮಾಡಬೇಕಿತ್ತು ಎಂದು ತಿಳಿಸಿದರು.

ನಮ್ಮ ಸರಕಾರ ಇದ್ದಾಗ ಕೋರ್ಟ್ ಸಮಸ್ಯೆ ಇದ್ದ ಕಾರಣ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿರಲಿಲ್ಲ. ಕೋರ್ಟ್‍ನಲ್ಲಿದ್ದ ಸಮಸ್ಯೆ ಬಗೆಹರಿಸಿ 13 ಸಾವಿರ ಶಿಕ್ಷಕರಿಗೆ ವರ್ಗಾವಣೆ ಆದೇಶವನ್ನು ಮಧು ಬಂಗಾರಪ್ಪ ಅವರು ನೀಡಿದ್ದಾರೆ. ಇದು ಒಳ್ಳೆಯ ಕೆಲಸ ಎಂದ ಅವರು, ಇಲಾಖೆಯ ಇತರ ಪ್ರಮುಖ ವಿಚಾರಗಳ ನಿರ್ಧಾರದ ವೇಳೆ ಸಂಬಂಧಿತರ ಜೊತೆ ಚರ್ಚಿಸಬೇಕಿತ್ತು ಎಂದರು. ಈ ಆದೇಶಗಳನ್ನು ಹಿಂಪಡೆಯಲು ಆಗ್ರಹಿಸಿದರು.

ವಿಧಾನಪರಿಷತ್ ಸದಸ್ಯ ಶಶಿಲ್ ನಮೋಶಿ ಅವರು ಮಾತನಾಡಿ, 7ನೇ ವೇತನ ಆಯೋಗದ ಅನುಷ್ಠಾನಕ್ಕೆ ಆಗ್ರಹಿಸಿದರು. ನವೆಂಬರ್‍ನಲ್ಲಿ ಅಂತಿಮ ವರದಿ ಬರಬೇಕಿತ್ತು. ಸಿದ್ದರಾಮಯ್ಯರ ಸರಕಾರವು ಪದವೀಧರರ 5ನೇ ಗ್ಯಾರಂಟಿಯತ್ತ ಗಮನ ಕೊಟ್ಟಿಲ್ಲ. ಹಣವಿಲ್ಲದ ಕಾರಣ 7ನೇ ವೇತನ ಆಯೋಗದ ವರದಿಯ ಅವಧಿಯನ್ನು ವಿಸ್ತರಿಸಿದೆ ಎಂದು ಆಕ್ಷೇಪಿಸಿದರು.

ಶಿಕ್ಷಣ ಇಲಾಖೆಯ ದೊಡ್ಡ ಪ್ರಮಾಣದ ಹುದ್ದೆಗಳು ಖಾಲಿ ಇವೆ. ಅವನ್ನು ತುಂಬಬೇಕು. ಅನುದಾನಿತ ಶಾಲಾ ಕಾಲೇಜುಗಳಲ್ಲಿ 2015ರ ನಂತರ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಎಂದು ಒತ್ತಾಯಿಸಿದರು. 1995ರ ನಂತರ ಪ್ರಾರಂಭವಾದ ಶಾಲೆಗಳಿಗೆ ಅನುದಾನ ಕೊಡಿ ಎಂದು ಅವರು ಆಗ್ರಹಿಸಿದರು.

ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ಅರುಣ್ ಶಹಾಪುರ, ಅಮರನಾಥ ಪಾಟೀಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.


Post a Comment

0Comments

Post a Comment (0)