ಮಡಿಕೇರಿ: ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ರೋಹಿಣಿ ಮಳೆ ಅಬ್ಬರಿಸಿದ್ದು, ಪರಿಣಾಮ ಕಾವೇರಿ ಭೋರ್ಗರೆದು ಹರಿಯುತ್ತಿದ್ದು, ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ ಜಿಲ್ಲೆಯ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿಯ ಉಗಮಸ್ಥಾನ ತಲಕಾವೇರಿ ಸೇರಿದಂತೆ ಬ್ರಹ್ಮಗಿರಿ ಬೆಟ್ಟ ಶ್ರೇಣಿಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಕಾವೇರಿ ನದಿಯ ಉಪನದಿಗಳಾದ ಕನ್ನಿಕೆ, ಸುಜ್ಯೋತಿ ನದಿ ಸಂಗಮ ಕ್ಷೇತ್ರವಾದ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಪ್ರತಿ ವರ್ಷದಂತೆ ಜೂನ್ ಅಥವಾ ಜುಲೈನಲ್ಲಿ ಮಳೆ ಸುರಿಯಬಹುದೆಂದು ನಂಬಿದವರ ನಂಬಿಕೆಯನ್ನು ರೋಹಿಣಿ ಮಳೆ ಸುಳ್ಳು ಮಾಡಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಇಷ್ಟೊಂದು ಮಳೆ ಸುರಿಯುತ್ತಿರಲಿಲ್ಲ. ಮುಂಗಾರು ಮಳೆಯ ಆರಂಭ ಕೂಡ ಜಿಟಿ, ಜಿಟಿ ಮಳೆಯಿಂದಲೇ ಆರಂಭವಾಗುತ್ತಿತ್ತು. ಆದರೀಗ ನಡು ಮಳೆಗಾಲದಲ್ಲಿ ಸುರಿದಂತೆ ಭಾರೀ ಮಳೆ ಸುರಿಯುತ್ತಿದ್ದು ಕಾವೇರಿ, ಲಕ್ಷ್ಮಣ ತೀರ್ಥ ನದಿ ಸೇರಿದಂತೆ ಹೊಳೆ, ತೊರೆಗಳು ತುಂಬಿ ಹರಿಯುತ್ತಿವೆ. ಮಳೆ ಜತೆಗೆ ಗಾಳಿಯೂ ಬೀಸುತ್ತಿರುವುದರಿಂದ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿದ್ದು, ಅಲ್ಲಲ್ಲಿ ವಿದ್ಯುತ್ ವ್ಯತ್ಯಯ ಕಾಣಿಸಿದೆ.
https://janamanakannada.com/