ಶ್ರೀ ಸುವಿದ್ಯೇಂದ್ರತೀರ್ಥರ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮ
# ಪವನ ಪರಿಮಳ ಪ್ರಸಾರಿಣೀ ಸಮಿತಿಯ 40ನೇ ವಾರ್ಷಿಕೋತ್ಸವ
ಬೆಂಗಳೂರು: ಪ್ರಕಾಶನಗರದ 10ನೇ ಮುಖ್ಯರಸ್ತೆ ಆರನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನದ
67ನೇ ಪ್ರತಿಷ್ಠಾಪನಾವರ್ಧಂತಿ ಮಹೋತ್ಸವ ಜೂನ್ 9ರಂದು ಆಯೋಜನೆಗೊಂಡಿದೆ.
ಇದೇ ಸಂದರ್ಭದಲ್ಲಿ ಶ್ರೀ ಮಠದ ಪವನ ಪರಿಮಳ ಪ್ರಸಾರಿಣಿ ಸಮಿತಿಯ 40ನೇ ವಾರ್ಷಿಕೋತ್ಸವವೂ ನೆರವೇರಲಿದೆ.
ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಅಂದು ಬೆಳಗ್ಗೆ 6 ಗಂಟೆಗೆ ರಾಯರ ಬೃಂದಾವನಕ್ಕೆ ಮಧು ಅಭಿಷೇಕ, ವಿಶೇಷ ಫಲ ಪಂಚಾಮೃತ ಅಭಿಷೇಕ ನಂತರ ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ ನೆರವೇರಲಿದೆ.
ಬೆಳಗ್ಗೆ 10 ಗಂಟೆಗೆ ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮೀಜಿ ಅವರಿಂದ ಸಂಸ್ಥಾನ ಪೂಜೆ 12-30ಕ್ಕೆ ಶ್ರೀಗಳಿಂದ ಶ್ರೀ ಗುರುರಾಯರಿಗೆ ಕನಕ ಅಭಿಷೇಕ ನೆರವೇರಲಿದೆ.
ವಿವಿಧ ಕ್ಷೇತ್ರದ ಗಣ್ಯರಿಗೆ ಗೌರವಾರ್ಪಣೆ:
ಶ್ರೀ ಮಠದ ಆವರಣದಲ್ಲಿ ಸಂಜೆ ಆರು ಮೂವತ್ತಕ್ಕೆ ವರ್ಧಂತಿ ಉತ್ಸವದ ಅಂಗವಾಗಿ ವಿವಿಧ ರಂಗದ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತತ್ವಜ್ಞಾನ ಕ್ಷೇತ್ರದ ಪಂಡಿತ ಆರ್. ವೆಂಕಟೇಶ ಆಚಾರ್ಯ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ವೈದ್ಯಕೀಯ ಕ್ಷೇತ್ರದ ಡಾ.ಕೆ .ಎಂ . ಸೋಮಶೇಖರಮೂರ್ತಿ, ಶಿಕ್ಷಣ ಕ್ಷೇತ್ರದ ಸಾಧಕ ಬಿ. ಕೆ. ಜಯಸಿಂಹ ಅವರನ್ನು ಗೌರವಿಸಲಾಗುವುದು.
ನಂತರ ವಿದ್ಯಾರ್ಥಿ ಮತ್ತು ಆರೋಗ್ಯನಿಧಿ ವಿತರಣೆ, ಶ್ರೀ ಸುವಿದ್ಯೇಂದ್ರತೀರ್ಥರಿಂದ ಅನುಗ್ರಹ ಸಂದೇಶವಿದೆ. ಭಕ್ತಾದಿಗಳು ಆಗಮಿಸಬೇಕು ಎಂದು ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ಎನ್. ಜಿ. ವೆಂಕಟೇಶಮೂರ್ತಿ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.