⦁ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ
⦁ ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ವತಿಯಿಂದ ಆಯೋಜನೆ
ಬೆಂಗಳೂರು, ಅ. 18: ಲಕ್ಷಾಂತರ ಜನರಿಗೆ ಶಿಕ್ಷಣದ ಮೂಲಕ ಜೀವನ ಕಟ್ಟಿ ಕೊಟ್ಟ ನ್ಯಾಷನಲ್ ಕಾಲೇಜುಗಳು ತಮ್ಮ ಗತವೈಭವಕ್ಕೆ ಮರಳುವಂತಾಗಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾರೈಸಿದ್ದಾರೆ.
ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ವತಿಯಿಂದ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, "ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣದ ಜತೆಗೆ ಸೇವಾ ಮನೋಭಾವವೂ ಇರುವುದರಿಂದ ಇಂತಹ ಕಾಲೇಜುಗಳು ಪ್ರಗತಿಯತ್ತ ಮುಂದುವರಿಯಬೇಕು," ಎಂದರು.
"ಹಿಂದೆ ಬೆಂಗಳೂರಿನಲ್ಲಿ ಹೈಸ್ಕೂಲ್ ಅಥವಾ ಕಾಲೇಜು ಎಂದರೆ ಅದು ನ್ಯಾಷನಲ್ ಕಾಲೇಜು ಎಂಬ ಖ್ಯಾತಿ ಇತ್ತು. ಇಲ್ಲಿ ಸೀಟು ಪಡೆಯುವುದೇ ಕಷ್ಟ ಎನ್ನುವಂತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬೇರೆ ಕಾಲೇಜುಗಳು ಆ ಸ್ಥಾನ ಪಡೆದಿವೆ. ಹೀಗಾಗಿ ನ್ಯಾಷನಲ್ ಕಾಲೇಜು ಎಚ್.ನರಸಿಂಹಯ್ಯ ಅವರ ಕಾಲದಲ್ಲಿದ್ದ ವೈಭವಕ್ಕೆ ಮರಳಬೇಕು. ಅಂತಹ ದಿನಗಳು ಶೀಘ್ರದಲ್ಲೇ ಬರಲಿದೆ," ಎಂದು ಹೇಳಿದರು.
ರಾಜ್ಯ ಮತ್ತು ದೇಶದಲ್ಲಿ ಸಾಕ್ಷರತೆ ಬೆಳೆಯಬೇಕಾದರೆ ಶಿಕ್ಷಕರ ಪಾತ್ರ ಮುಖ್ಯ. ಸ್ವಾತಂತ್ರ್ಯಾನಂತರ ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಲು ಶಿಕ್ಷಕರ ಸೇವಾ ಮನೋಭಾವ ಕಾರಣ. ಎಂದು ಹೇಳಿದ ಸಚಿವ ರಾಮಲಿಂಗಾರೆಡ್ಡಿ, "ಗುರುವಂದನೆ ಎಂದು ಶಿಕ್ಷಕರನ್ನು ಗೌರವಿಸುವುದು ಅದರಲ್ಲೂ ಮುಖ್ಯವಾಗಿ ಈ ಬಾರಿ ಎಲ್ಲಾ 410 ಶಿಕ್ಷಕರಿಗೂ ಗುರುವಂದನೆ ಸಲ್ಲಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ," ಎಂದು ತಿಳಿಸಿದರು.
"ನಾವು ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಮಕ್ಕಳು ಚೆನ್ನಾಗಿ ಕಲಿಯಲಿ, ಬುದ್ಧಿವಂತರಾಗಲಿ ಎಂಬ ಕಾರಣಕ್ಕೆ ಶಿಕ್ಷಕರು ತಪ್ಪು ಮಾಡಿದವರಿಗೆ ಹೊಡೆಯುತ್ತಿದ್ದರು. ಪೋ,ಕರೇ ಶಿಕ್ಷಕರಿಗೆ ಮನವಿ ಮಾಡಿ ಅವನಮಿಗೆ ನಾಲ್ಕು ಹೊಡೆದು ಬುದ್ಧಿ ಹೇಳಿ ಎನ್ನುತ್ತಿದ್ದರು. ಆದರೆ, ಈಗ ಶಿಕ್ಷಕರು ಆ ರೀತಿ ಮಾಡಿದರೆ ಅವರ ವಿರುದ್ಧ ದೂರು ನೀಡುವ ಪರಿಸ್ಥಿತಿ ಬಂದಿದೆ. ಇಂತಹ ಪರಿಸ್ಥಿತಿಯಲ್ಲೂ ಉತ್ತಮ ರೀತಿಯಲ್ಲಿ ಮಕ್ಕಳನ್ನು ತಿದ್ದಿ ಶಿಕ್ಷಣ ನೀಡುತ್ತಿರುವ ಶಿಕ್ಷಕರಿಗೆ ಅಭಿನಂದನೆಗಳು," ಎಂದರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, "ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರು ಸರ್ಕಾರ, ಸಮಾಜದಿಂದ ನಿರ್ಲಕ್ಷಕ್ಕೊಳಪಡುತ್ತಿದ್ದಾರೆ. ಮಕ್ಕಳ ಪೋಷಕರೂ ಶಿಕ್ಷಕರ ಬಗ್ಗೆ ಗೌರವ ಹೊಂದಿಲ್ಲ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಶಿಕ್ಷಕರನ್ನು ಕಸದ ಬುಟ್ಟಿಯಲ್ಲಿ ತುಂಬುತ್ತದೆ. ಸಮಾಜ ಕೂಡ ಅದೇ ರೀತಿಯಲ್ಲಿ ಆಲೋಚನೆ ಮಾಡುತ್ತಿದೆ. ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕೆಲಸದತ್ತ ಗಮನಹರಿಸುವ ಪೋಷಕರು ಎಲ್ಲವನ್ನೂ ಶಿಕ್ಷಕರೇ ಮಾಡಬೇಕು ಎಂದು ಬಯಸುತ್ತಾರೆ. ಮೂರು ತಾಸು ಪಾಠ ಮಾಡದವನು ಶಿಕ್ಷಣ ತಜ್ಞನಾಗಿ ಶಿಕ್ಷಕರು ಹೇಗಿರಬೇಕು? ಪಠ್ಯ ಹೇಗಿರಬೇಕು ಎಂದು ನಿರ್ಧರಿಸುವಂತಾಗಿದೆ. ಇಂತಹ ಕಷ್ಟದ ಸಂದರ್ಭದಲ್ಲೂ ಕಷ್ಟ ಪಟ್ಟು ಕೆಲಸ ಮಾಡುವ ಗುರುಗಳನ್ನು ಗೌರವಿಸುವುದು ಅತ್ಯಂತ ಸಂತೋಷದ ಸಂಗತಿ," ಎಂದು ಹೇಳಿದರು.
ನ್ಯಾಷನಲ್ ಕಾಲೇಜಿನ ಇತ್ತೀಚಿನ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, "ಎಚ್.ನರಸಿಂಹಯ್ಯ ಅವರು ಇದ್ದಾಗ ಪ್ರತಿ ವರ್ಷ ಸೀಟ್ ಕೊಡಿಸಲು ಅವರ ಬಳಿ ಬರುತ್ತಿದ್ದೆವು. ಅಂತಹ ದಿನಗಳು ಮರುಕಳಿಸುತ್ತಿದೆ. ಆದರೆ, ಆ ನಿಟ್ಟಿನಲ್ಲಿ ಕೆಲಸ ಮಾಡುವಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಅದನ್ನು ಎದುರಿಸಿ ಇದೇ ರೀತಿ ಶಿಕ್ಷಣ ಸಂಸ್ಥೆಯನ್ನು ಮುಂದುವರಿಸಿದರೆ ನ್ಯಾಷನಲ್ ಕಾಲೇಜು ತನ್ನ ಗತ ವೈಭವಕ್ಕೆ ಮರಳುತ್ತದೆ ,"ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನ್ಯೂಸ್ ಫರ್ಸ್ಟ್ ಕನ್ನಡದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ರವಿಕುಮಾರ್ ಮಾತನಾಡಿ, "ಯಾವುದೇ ವ್ಯಕ್ತಿಗೆ ವಿದ್ಯೆ, ಜ್ಞಾನ ಮತ್ತು ಸಂಸ್ಕಾರ ಎನ್ನುವುದು ಮುಖ್ಯ. ಈ ಮೂರನ್ನೂ ನೀಡುವ ಗುರುಗಳಿಗೆ ಸಮಾಜ ಅಭಾರಿಯಾಗಿರಬೇಕು. ಆ ನಿಟ್ಟಿನಲ್ಲಿ ನ್ಯಾಷನಲ್ ಕಾಲೇಜು ವತಿಯಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಿರುವುದು ಸ್ತುತ್ಯರ್ಹ," ಎಂದು ಹೇಳಿದರು.
ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಡಾ.ಎಚ್.ಎನ್.ಸುಬ್ರಮಣ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಎಲ್ ವಿ ಹೌಸಿಂಗ್ ಡೆವಲಪ್ ಮೆಂಟ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ಎಚ್.ನಾಗರಾಜ್, ಸೊಸೈಟಿಯ ಉಪಾಧ್ಯಕ್ಷ ಯಡ್ಲಾಮ್ ಜಿ. ಮಧುಸೂಧನ್, ಕಾರ್ಯದರ್ಶಿಗಳಾದ ಬಿ.ಎಸ್.ಅರುಣ್ ಕುಮಾರ್, ವಿ.ವೆಂಕಟಶಿವಾ ರೆಡ್ಡಿ, ಸಹ ಉಪಾಧ್ಯಕ್ಷ ವಿ. ಮಂಜುನಾಥ್, ಖಜಾಂಚಿ ತಲ್ಲಂ ಆರ್. ದ್ವಾರಕಾನಾಥ್, ಜಂಟಿ ಕಾರ್ಯದರ್ಶಿ ಮತ್ತು ಬಸವನಗುಡಿ ನ್ಯಾಷನಲ್ ಕಾಲೇಜು ಚೇರ್ ಮೆನ್ ಸುಧಾಕರ್ ಎಸ್ತೂರಿ, ಜಯನಗರ ನ್ಯಾಷನಲ್ ಕಾಲೇಜು ಚೇರ್ ಮೆನ್ ಡಾ.ಪಿ.ಎಲ್.ವೆಂಕಟ್ರಾಮ ರೆಡ್ಡಿ, ನ್ಯಾಷನಲ್ ಪಿಯು ಕಾಲೇಜು ಚೇರ್ ಮೆನ್ ರಾಮಮೋಹನ್ ಕೆ.ಎನ್., ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಚೇರ್ ಮೆನ್ ಪಾವನ, ಬಸವನಗುಡಿ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ ಚೇರ್ ಮೆನ್ ಡಾ.ರಾಜ್ ಕುಮಾರ್, ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಕಾರ್ಯಕಾರಿ ಸಮಿತಿ ಚೇರ್ ಮೆನ್ ಜಿ.ಎಂ. ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.