ಬೆಂಗಳೂರು: ಪವಿತ್ರ ವೈಕುಂಠ ಏಕಾದಶಿಯ ಸಂದರ್ಭದಲ್ಲಿ ಶರವಣ ಚಾರಿಟಬಲ್ ಟ್ರಸ್ಟ್ ನಿಂದ ಭಕ್ತರಿಗಾಗಿ ವಿಶಿಷ್ಟ ಸೇವಾ ಕಾರ್ಯವಾಗಿ 1 ಲಕ್ಷ ಲಡ್ಡು ಪ್ರಸಾದ ವಿತರಣೆಗೆ ಸಜ್ಜಾಗಿದೆ. ಒಂದು ಲಕ್ಷ ಲಡ್ಡು ಪ್ರಸಾದವನ್ನು ನುರಿತ ಬಾಣಸಿಗರು ತಯಾರಿಸಿದ್ದು, ಬಸವನಗುಡಿಯ ಡಿವಿಜಿ ರಸ್ತೆಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ 3ನೇ ಮಹಡಿಯಲ್ಲಿರುವ ಶ್ರೀ ಸಾಯಿ ಪಾರ್ಟಿ ಹಾಲ್ನಲ್ಲಿ ಲಡ್ಡು ಪ್ರಸಾದಕ್ಕೆ ಪೂಜೆ ನೆರವೆರಿಸಿದ ಟ್ರಸ್ಟ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕರಾದ ಟಿ.ಎ. ಶರವಣ ಚಾಲನೆ ನೀಡಿದರು.
ಬೆಂಗಳೂರಿನ ವಿವಿಧ ವೆಂಕಟೇಶ್ವರ ದೇವಾಲಯಗಳಿಗೆ ಒಟ್ಟು 1 ಲಕ್ಷ ಲಡ್ಡು ಪ್ರಸಾದವನ್ನು ವಿತರಿಸಲಾಗಿದ್ದು, ಭಕ್ತರಿಂದ ಉತ್ತಮ ಸ್ಪಂದನೆ ದೊರೆಯಿತು. ವೈಕುಂಠ ಏಕಾದಶಿ ದಿನ ಮಹಾವಿಷ್ಣು ವೈಕುಂಠದ ಬಾಗಿಲು ತೆರೆಯುತ್ತಾನೆ ಎಂಬ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಈ ಸೇವೆಯನ್ನು ಭಕ್ತಿಭಾವದಿಂದ ಆಯೋಜಿಸಲಾಗಿತ್ತು.
ನಂತರ ಮಾತನಾಡಿದ ಟಿ.ಎ.ಶರವಣ, ಶರವಣ ಚಾರಿಟಬಲ್ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಹಾಗೂ ಮಾನವೀಯ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಸೇವೆ ಮಾಡುತ್ತಿದೆ ಎಂದು ತಿಳಿಸಿದರು.
ಪೂಜಾ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆಯಲ್ಲಿ ಟ್ರಸ್ಟ್ ಸದಸ್ಯರು, ಸ್ವಯಂಸೇವಕರು ಹಾಗೂ ಭಕ್ತರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.