ಬೆಂಗಳೂರು: ಮೌಲ್ಯಾಧಾರಿತ ಬದುಕು ಮತ್ತು ಸಮಾಜಮುಖಿ ಸೇವೆಯ ಮೂಲಕ ನಾಡಿನ ಗೌರವಕ್ಕೆ ಪಾತ್ರರಾಗಿರುವ ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪ ಅವರ ವಜ್ರಪೂರ್ಣ ಸೇವಾ ಬದುಕಿನ ಸ್ಮರಣಾರ್ಥವಾಗಿ ‘ನಿಸ್ಸ್ವಾರ್ಥ ಸಿರಿ’ ಅಭಿನಂದನಾ ಗ್ರಂಥವನ್ನು ನಗರದ ಗಾಂಧಿ ಭವನದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನಾಡೋಜ ಡಾ. ಶಿವರಾಜ ವಿ. ಪಾಟೀಲ ಅವರು, “ಡಾ. ಲಕ್ಷ್ಮೀನಾರಾಯಣಪ್ಪ ಅವರ ಬದುಕು ಘೋಷಣೆ ಇಲ್ಲದ ಸೇವೆಯ, ಪ್ರದರ್ಶನವಿಲ್ಲದ ಶಿಸ್ತಿನ ಹಾಗೂ ನಿರೀಕ್ಷೆಯಿಲ್ಲದ ಸಮಾಜಬದ್ಧತೆಯ ಪ್ರತೀಕ” ಎಂದು ಹೇಳಿದರು. ಮೂರು ದಶಕಗಳ ಸರ್ಕಾರಿ ಸೇವೆಯ ನಂತರವೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಡಾ. ಲಕ್ಷ್ಮೀನಾರಾಯಣಪ್ಪ ಅವರ ಬದುಕು ಮುಂದಿನ ಪೀಳಿಗೆಗೆ ಪ್ರೇರಣೆಯಾಗುವಂತಹದ್ದು. ಅವರ ವ್ಯಕ್ತಿತ್ವ, ಸಂಘಟನೆ, ಸಾಮಾಜಿಕ ಬದ್ಧತೆ ಹಾಗೂ ಮಾನವೀಯ ಮೌಲ್ಯಗಳನ್ನು ಈ ಗ್ರಂಥ ಸಮಗ್ರವಾಗಿ ದಾಖಲಿಸಿದೆ.ನಾಡೋಜ ಡಾ. ವೂಡೇ ಪಿ. ಕೃಷ್ಣ ಪ್ರಧಾನ ಸಂಪಾದಕರಾಗಿ ಹಾಗೂ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಸಂಪಾದಕರಾಗಿ ಈ ಗ್ರಂಥವನ್ನು ಸಿದ್ಧಪಡಿಸಲಾಗಿದೆ. ಕಾರ್ಯಕ್ರಮವನ್ನು ಮಾಜಿ ಸಂಸದ ಕೆ.ಎಸ್. ಕೊಂಡಯ್ಯ ಉದ್ಘಾಟಿಸಿದರು. ಹಿರಿಯ ಸಾಹಿತಿ ಪ್ರೊ. ಹಂಪನಾ ಅವರು ಗ್ರಂಥವನ್ನು ಲೋಕಾರ್ಪಣೆ ಮಾಡಿದರು. ನಾಡೋಜ ಡಾ. ವೂಡೇ ಪಿ. ಕೃಷ್ಣ, ಹೆಚ್.ಎಂ. ರೇವಣ್ಣ ಹಾಗೂ ಪ್ರಕಾಶಕ ಬಿ.ಕೆ. ಸುರೇಶ್ ಉಪಸ್ಥಿತರಿದ್ದರು.