ವಿಜ್ಞಾನಿಗಳು, ಸಾಧು ಸಂತರ ಮಾರ್ಗ ಒಂದೇ – ಇಸ್ರೋ ಮಾಜಿ ಅಧ್ಯಕ್ಷ ಡಾ|| ಎಸ್. ಸೋಮನಾಥ್

varthajala
0

 ಬೆಂಗಳೂರು,ಜ.29: ಧಾರ್ಮಿಕ ವಲಯ ಮಾನವನ ಶ್ರೇಷ್ಠತೆಗಾಗಿ ಶ್ರಮಿಸುತ್ತದೆ. ವಿಜ್ಞಾನಿಗಳು ಭೌಗೋಳಿಕ ಜಗತ್ತಿನ ಕೌತುಗಳನ್ನು ಅನ್ವೇಷಿಸುತ್ತಾರೆ. ಇಬ್ಬರ ಕೆಲಸ ಪರಿಶೋಧನೆ ಮತ್ತು ಸತ್ಯಾನ್ವೇಷಣೆಯಾಗಿದೆ. ಇಬ್ಬರ ಹಾದಿಯೂ ಒಂದೇ ಆಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಚಾಣಕ್ಯ ವಿ.ವಿ.ಯ ಕುಲಪತಿ ಡಾ|| ಎಸ್. ಸೋಮನಾಥ್ ಹೇಳಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಕೆ.ಆರ್. ನಗರದ ಯಡತೊರೆ ಶ್ರೀ ಯೋಗಾನಂದ ಸರಸ್ವತಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ವೇದಾಂತ ಭಾರತಿ ಹಾಗೂ ಪರಮ್ ಫೌಂಡೇಶನ್ ನಿಂದ ಆಯೋಜಿಸಲಾದ ನಾಲ್ಕು ದಿನಗಳ  ರಾಷ್ಟ್ರಮಟ್ಟದ ಬೃಹತ್ “ವಿವೇಕ ದೀಪ್ತಿ” ಸಮಾವೇಶದಲ್ಲಿ ವಿಜ್ಞಾನ ಮತ್ತು ಧರ್ಮ ಕುರಿತು ಮಾತನಾಡಿದ ಅವರು, ವಿಜ್ಞಾನಿಗಳು ಭೂಮಂಡಲದ ಬಗ್ಗೆ ಆಳವಾದ ಅಧ್ಯಯನ ನಡೆಸುತ್ತಾರೆ. ಸಾಧು, ಸಂತರು ಪಾರಮಾರ್ಥಿಕ ಸತ್ಯವನ್ನು ಅರಸುತ್ತಾರೆ.
ಈ ದೇಶದಲ್ಲಿ ನಾವು ಸಹಸ್ರಾರು ವರ್ಷಗಳಿಂದ ಬದುಕುತ್ತಿದ್ದು, ನಮ್ಮಲ್ಲಿ ಪರಮೋಚ್ಛ ಜ್ಞಾನವಿದೆ. ಈ ಸಂಕಿರ್ಣದಾಯಕ ಪರಿಸ್ಥಿತಿ ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕು. ಋಷಿಮುನಿಗಳು ತಪಸ್ಸಿನ ಮೂಲಕ ಸಾಧನೆ ಮಾಡಿದರೆ, ವಿಜ್ಞಾನಿಗಳು ಸಹ ಸಂಶೋಧನೆಯನ್ನು ತಪಸ್ಸಿನಂತೆ ಏಕಾಗ್ರತೆಯಿಂದ ಕೈಗೊಳ್ಳುತ್ತಾರೆ. ವಿಜ್ಞಾನದಲ್ಲಿ ಹಲವಾರು ಸಿದ್ಧಾಂತಗಳಿವೆ. ಧರ್ಮದಲ್ಲೂ ಭಿನ್ನ, ಭಿನ್ನ ಸಿದ್ಧಾಂತಗಳಿವೆ. ವಿಜ್ಞಾನದಲ್ಲೂ ಪರಿಕಲ್ಪನೆಗಳಿವೆ. ಆಯಾಮಗಳಿವೆ ಎಂದರು.
ಇತಿಹಾಸ ತಜ್ಞ ಡಾ|| ವಿಕ್ರಮ್ ಸಂಪತ್ ಮಾತನಾಡಿ, ಭಾರತದ ಪ್ರಾಚೀನ ಜ್ಞಾನ ಪರಂಪರೆ ಬೃಹತ್ತಾದದ್ದು, ಮಹತ್ತಾದ್ದದು ಆಗಿದೆ. ನಮ್ಮ ನಾಲ್ಕು ಸಾವಿರ ವರ್ಷಗಳ ಜ್ಞಾನ ಸಂಪತನ್ನು ನಾಶಪಡಿಸಲು ವ್ಯಾಪಕ ಪ್ರಯತ್ನ ನಡೆಯಿತು. ಜಗತ್ತಿನ ಅತಿ ದೊಡ್ಡ ನಳಂದ ವಿಶ್ವವಿದ್ಯಾಲಯವನ್ನು ಸುಟ್ಟು ಭಸ್ಮ ಮಾಡಲಾಯಿತು. ಈ ಸಮಯದ ಆರು ತಿಂಗಳಲ್ಲಿ ತಕ್ಷಶಿಲಾ, ವಿಕ್ರಮ ಶಿಲಾ ಒಳಗೊಂಡಂತೆ ಹಲವಾರು ವಿಶ್ವವಿದ್ಯಾಲಯಗಳನ್ನು, ಅಲ್ಲಿನ ಅಕ್ಷರ ಸಂಸ್ಕೃತಿಯನ್ನು ನಾಮಾವಶೇಷಗೊಳಿಸಿದರು. ಇಷ್ಟಾದರೂ ನಮ್ಮ ಜ್ಞಾನ ಸಂಪತ್ತು ನಮ್ಮ ಮೆದುಳಿನಲ್ಲಿ ಸುಪ್ತವಾಗಿ, ಆಳವಾಗಿ ಅಡಗಿದೆ. ಹೀಗಾಗಿ ನಮ್ಮ ವೈಜ್ಞಾನಿಕ ಸ್ಫೂರ್ತಿಗೆ ಯಾರೊಬ್ಬರೂ ಧಕ್ಕೆ ತರಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಪರಂಮ್ ಫೌಂಡೇಷನ್ ನ ಟ್ರಸ್ಟಿ ಶ್ರೀನಿವಾಸ ಗುಪ್ತಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಸೃಜಿಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. 150 ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ನಾವೀನ್ಯತೆ ವಲಯದಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು ಹೊರ ಹೊಲಯದ ಚೆನ್ನೇನ ಹಳ್ಳಿಯಲ್ಲಿ ಬೃಹತ್ ವಿಜ್ಞಾನ ಸಂಸ್ಥೆ ತಲೆ ಎತ್ತುತ್ತಿದ್ದು, ಇದು ಪ್ರಪಂಚದಲ್ಲೇ ಶ್ರೇಷ್ಠ ಸಂಸ್ಥೆಯಾಗಿ ರೂಪಿಸಲಾಗುವುದು. ಇದಕ್ಕಾಗಿ ವೇದಾಂತ ಭಾರತಿ ಸಂಸ್ಥೆಯೊಂದಿಗೆ ರಚನಾತ್ಮಕ ಕೆಲಸ ಮಾಡುತ್ತಿದ್ದೇವೆ ಎಂದರು.
ಯಡತೊರೆ ಮಠದ ಪರಮಪೂಜ್ಯ ಶ್ರೀ ಶ್ರೀ ಬ್ರಹ್ಞಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ವೇದ, ಉಪನಿಷತ್ತು, ಅತ್ಯಂತ ಶ್ರೇಷ್ಠವಾದದ್ದು. ಶ್ರೀ ಶಂಕರ ಭಗವತ್ಪಾದರು ನಮಗೆ ಕೊಟ್ಟಿರುವ ಸ್ತೋತ್ರಗಳು ಸರ್ವಕಾಲಿಕವಾದದ್ದು ಎಂದರು.
ಇದೇ ಸಂದರ್ಭದಲ್ಲಿ ವಿಜ್ಞಾನ – ಧರ್ಮ ಕುರಿತಂತೆ ವೇದಾಂತ ಭಾರತಿ ಮತ್ತು ಪರಂ ಫೌಂಡೇಷನ್ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಬಾಕ್ಸ್ – 1
ಬೇರೆ ಬೇರೆ ಕಾಲೇಜು ಹಾಗೂ ಸಂಸ್ಥೆಗಳಿಂದ 50ಕ್ಕೂ ಹೆಚ್ಚು ನಾವೀನ್ಯತೆಯ ಪ್ರದರ್ಶನ ಮಳಿಗೆಗಳು ಅನಾವರಣಗೊಂಡಿವೆ. ಪ್ರತಿಯೊಂದು ವಿಭಿನ್ನವಾಗಿದ್ದು, ವಿದ್ಯಾರ್ಥಿಗಳ ಸೃಜನಶೀಲತೆಗೆ ಇವು ಸಾಕ್ಷಿಯಾಗಿವೆ. ಶಾಲಾಕಾಲೇಜಿನ ವಿದ್ಯಾರ್ಥಿಗಳು, ಯುವ ಸಮೂಹ  ಹಾಗೂ ಸಾರ್ವಜನಿಕರು ಈ ಪ್ರದರ್ಶನವನ್ನು ವೀಕ್ಷಿಸಿ ಬಾಲ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ಇಂತಹ ವಿದ್ಯಾರ್ಥಿಗಳೇ ಮುಂದೆ ಮಹತ್ವದ ಸಾಧನೆ ಮಾಡಲಿದ್ದಾರೆ.
ಡಾ|| ಎಸ್. ಸೋಮನಾಥ್ಇಸ್ರೋ ಮಾಜಿ ಅಧ್ಯಕ್ಷರು ಹಾಗೂ ಚಾಣಕ್ಯ ವಿ.ವಿ.ಯ ಕುಲಪತಿ
ಬಾಕ್ಸ್ -2
ವೇದಾಂತ ಭಾರತಿ ಸಂಸ್ಥೆ ವಿದ್ಯಾರ್ಥಿಗಳಿಗೆ ಧಾರ್ಮಿಕ, ವೈಜ್ಞಾನಿಕ ಮನೋಭಾವ ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ನಾವು ನಡೆಸುತ್ತಿರುವ ಚಟುವಟಿಕೆಗಳ ಫಲ ವಿದ್ಯಾರ್ಥಿ ಸಮುದಾಯಕ್ಕೆ ತಲುಪುತ್ತಿದೆಯೋ ಇಲ್ಲವೋ ಎನ್ನುವ ಕುರಿತು ಕಾಲ ಕಾಲಕ್ಕೆ ಅಭಿಪ್ರಾಯ ಸಂಗ್ರಹ, ಮೌಲ್ಯ ಮಾಪನ ಮಾಡುತ್ತಿದ್ದೇವೆ. ಸಾಕಷ್ಟು ಬದಲಾವಣೆ, ಸುಧಾರಣೆ ಮೂಲಕ ನಾವು ಸಮಾಜದಲ್ಲಿ ರಚನಾತ್ಮಕ ಚಟುವಟಿಕೆಯನ್ನು ಮುಂದುವರೆಸುತ್ತಿದ್ದೇವೆ.
ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತಿ ಸ್ವಾಮೀಜಿ ಕೆ. ಆರ್. ನಗರದ ಯಡತೊರೆ ಶ್ರೀ ಯೋಗಾನಂದ ಸರಸ್ವತಿ ಮಠಾಧೀಶರು

Post a Comment

0Comments

Post a Comment (0)