ಬೆಂಗಳೂರು : ಕರ್ನಾಟಕ ಸರ್ಕಾರದ ಉದ್ದಿಮೆಯಾದ ಕರ್ನಾಟಕ ರಾಜ್ಯ ಬೀಜ ನಿಗಮವು 2024-25ನೇ ಸಾಲಿನಲ್ಲಿ ಅತ್ಯುತ್ತಮ ಆರ್ಥಿಕ ಪ್ರಗತಿ ಸಾಧಿಸಿದ್ದು, ರಾಜ್ಯ ಸರ್ಕಾರಕ್ಕೆ ತನ್ನ ಲಾಭಾಂಶದ ಪಾಲಾಗಿ ರೂ. 1.69 ಕೋಟಿಗಳ ಚೆಕ್ಕನ್ನು ಹಸ್ತಾಂತರಿಸಿದೆ.ಕಳೆದ 53 ವರ್ಷಗಳಿಂದ ರಾಜ್ಯದ ರೈತರಿಗೆ ಸೇವೆ ಸಲ್ಲಿಸುತ್ತಿರುವ ನಿಗಮವು, ಪ್ರಸಕ್ತ ಸಾಲಿನಲ್ಲಿ ಗಮನಾರ್ಹ ಮೈಲಿಗಲ್ಲುಗಳನ್ನು ತಲುಪಿದೆ.
ಆರ್ಥಿಕ ಸಾಧನೆ ಮತ್ತು ಪ್ರಗತಿ:2024-25ನೇ ಹಣಕಾಸು ವರ್ಷದಲ್ಲಿ ನಿಗಮವು ಒಟ್ಟು ರೂ. 349.72 ಕೋಟಿಗಳ ವಹಿವಾಟು ನಡೆಸಿದೆ. ಈ ಅವಧಿಯಲ್ಲಿ ಸಂಸ್ಥೆಯು ರೂ. 13.48 ಕೋಟಿಗಳ ನಿವ್ವಳ ಲಾಭವನ್ನು ಗಳಿಸಿದೆ. ಸರ್ಕಾರದ ಮಾರ್ಗಸೂಚಿಯಂತೆ ನಿವ್ವಳ ಲಾಭದ ಶೇ. 30 ರಷ್ಟು ಭಾಗವಾದ ರೂ. 1.69 ಕೋಟಿಗಳನ್ನು ಲಾಭಾಂಶದ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ. ನಿಗಮವು ಪ್ರಸ್ತುತ 24 ಬೆಳೆಗಳ 153 ವಿವಿಧ ತಳಿಗಳ ಪ್ರಮಾಣಿತ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ರೈತರಿಗೆ ತಲುಪಿಸುತ್ತಿದೆ. ಸುಮಾರು 4.50 ಲಕ್ಷ ರೈತರು ನಿಗಮದ ಈ ಬಿತ್ತನೆ ಬೀಜಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಚೆಕ್ ಹಸ್ತಾಂತರ:2026 ನೇ ಫೆಬ್ರವರಿ 06 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆದ ಅಂತರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ, ಮಾನ್ಯ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರ ಸಮ್ಮುಖದಲ್ಲಿ, ಬೀಜ ನಿಗಮದ ಅಧ್ಯಕ್ಷರಾದ ಎಂ. ಅಂಜನಪ್ಪ ಅವರು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಲಾಭಾಂಶದ ಚೆಕ್ಕನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್. ಸೆಲ್ವಕುಮಾರ್, ಕೃಷಿ ಆಯುಕ್ತರಾದ ವೈ.ಎಸ್. ಪಾಟೀಲ, ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಶೋಕ.ಕೆ.ಜಿ. ಅವರು ಉಪಸ್ಥಿತರಿದ್ದರು ಎಂದು ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.