ಬೆಂಗಳೂರು : ಜೈಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ‘ಹೊಂದಿಸಿ ಬರೆಯಿರಿʼ ಖ್ಯಾತಿಯ ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ʼತೀರ್ಥರೂಪ ತಂದೆಯವರಿಗೆʼ ಚಿತ್ರ 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡು ನೋಡುಗರ ಮೆಚ್ಚುಗೆ ಪಡೆಯಿತು. ಪ್ರದರ್ಶನದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.ಮೊದಲು ಮಾತನಾಡಿದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್, ಹೊಸವರ್ಷದ ಆರಂಭದ ದಿನ ಬಿಡುಗಡೆಯಾದ ನಮ್ಮ ‘ತೀರ್ಥರೂಪ ತಂದೆಯವರಿಗೆʼ ಚಿತ್ರ ಜನರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ನಿಹಾರ್ ನಾಯಕನಾಗಿ, ರಚನಾ ಇಂದರ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಬಹಳ ವರ್ಷಗಳ ನಂತರ ಹಿರಿಯ ನಟಿ ಸಿತಾರಾ ಅವರು ಅಭಿನಯಿಸಿದ್ದಾರೆ.
ಅಜಿತ್ ಹಂದೆ, ರಾಜೇಶ್ ನಟರಂಗ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಮ್ಮ ಚಿತ್ರ ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾಗಿರುವುದು ಬಹಳ ಸಂತೋಷವಾಗಿದೆ. ಚಿತ್ರೋತ್ಸವದಲ್ಲಿ ನಮ್ಮ ಚಿತ್ರವನ್ನು ನೋಡಿದವರಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಬಹಳ ದಿನಗಳ ನಂತರ ಉತ್ತಮ ಕೌಟುಂಬಿಕ ಚಿತ್ರವೊಂದನ್ನು ನೋಡಿದ್ದು ಖುಷಿಯಾಗಿದೆ ಎಂದು ಹಲವರು ಹೇಳಿದ್ದು ಕೇಳಿ ಮನ ತುಂಬಿ ಬಂದಿದೆʼ ಎಂದರು.ನಾಯಕ ನಿಹಾರ್ ಮುಖೇಶ್ ಮಾತನಾಡಿ, ನನ್ನ ಅಭಿನಯದ ಮೊದಲ ಕನ್ನಡ ಚಿತ್ರ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿರುವುದು ಬಹಳ ಸಂತೋಷವಾಗಿದೆ ಎಂದರು. ನಾಯಕಿ ರಚನ ಇಂದರ್, ಈ ಬಾರಿ ನನ್ನ ಅಭಿನಯದ ಎರಡು ಚಿತ್ರಗಳು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುತ್ತಿದೆ. ‘ತೀರ್ಥರೂಪ ತಂದೆಯವರಿಗೆʼ ಚಿತ್ರಕ್ಕೆ ಎಲ್ಲಾ ಕಡೆಯಿಂದಲೂ ಸಿಗುತ್ತಿರುವ ಉತ್ತಮ ಪ್ರಶಂಸೆಗೆ ಖುಷಿಯಾಗಿದೆ ಎಂದರು.ನಟ ಅಜಿತ್ ಹಂದೆ ಮಾತನಾಡಿ, ಚಿತ್ರೋತ್ಸವಗಳಲ್ಲಿ ಒಳ್ಳೆಯ ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ಹಾಗಾಗಿ ನಮ್ಮ ಚಿತ್ರ ಕೂಡ ಒಂದು ಒಳ್ಳೆಯ ಚಿತ್ರ. ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾನು ಅಭಿನಯಿಸಿರುವುದು ಸಂತೋಷವಾಗಿದೆ ಎಂದರು.Post a Comment
0Comments