HORATTI : ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಹಾಗೂ ಲಿಖಿತ ಸಂವಿಧಾನ : ಹೊರಟ್ಟಿ

varthajala
0

ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಹಾಗೂ ಲಿಖಿತ ಸಂವಿಧಾನ ನಮ್ಮದಾಗಿದ್ದು, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರಿಂದ ರಚಿತವಾಗಿರುವ ನಮ್ಮ ಹೆಮ್ಮೆಯ ಸಂವಿಧಾನದಲ್ಲಿ ಎಲ್ಲಾ ಜಾತಿ, ಮತ, ಪಂಥ ಹಾಗೂ ವರ್ಗಗಳಿಗೆ ಸೇರಿದ ಜನರ ಹಿತವಿದೆ ಎಂದು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಎಸ್. ಹೊರಟ್ಟಿ ಅವರು ತಿಳಿಸಿದರು.

ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ, “ಸಂವಿಧಾನ ದಿವಸ” ಆಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತಾಡಿದ ಅವರು, 1949 ರ ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಿದ ದಿನವಾಗಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂದಿನ ದಿನ ನಮ್ಮೆಲ್ಲರಿಗೂ ಅತ್ಯಂತ ಅವಿಸ್ಮರಣೀಯ.  ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ದೇಶದ ಪ್ರಜಾಪ್ರಭುತ್ವದ ಭದ್ರ ಬುನಾದಿಯೇ ನಮ್ಮ ಸಂವಿಧಾನ ಎಂಬುದು ಅತ್ಯಂತ ಗೌರವ ಮತ್ತು ಹೆಮ್ಮೆಯ ಸಂಗತಿಯಾಗಿದೆ. ಹಲವು ವೈಶಿಷ್ಟ್ಯತೆಯನ್ನು ಹೊಂದಿರುವ ನಮ್ಮ ಸಂವಿಧಾನ ನಮ್ಮೆಲ್ಲಾ ನಾಗರೀಕರನ್ನು ಸಶಕ್ತಗೊಳಿಸಿ, ಸರ್ವರಿಗೂ ಸಮಾನತೆಯ ಅವಕಾಶ ನೀಡಿ, ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ. ಇಂತಹ ಸಂವಿಧಾನದ ಮಹತ್ವದ ಬಗ್ಗೆ ದೇಶದ ಎಲ್ಲಾ ನಾಗರೀಕರಲ್ಲಿ ಅರಿವು ಮೂಡಿಸಿ ಸಂವಿಧಾನದ ಬಗ್ಗೆ ಗೌರವ ಮೂಡಿಸುವುದರ ಜೊತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಸಂವಿಧಾನ ದಿನಾಚರಣೆಯ ಮೂಲ ಉದ್ದೇಶವಾಗಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರೇ ಹೇಳಿರುವಂತೆ “ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ನಾನು ಇಷ್ಟ ಪಡುತ್ತೇನೆ”. “ನಾವೆಲ್ಲರೂ ನಮ್ಮ ಸ್ವಂತ ಬಲದಿಂದ ಗಟ್ಟಿಯಾಗಿ ನಿಲ್ಲಬೇಕು ಮತ್ತು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು ಎಂದರು.
ಎಲ್ಲಾ ಧರ್ಮಗ್ರಂಥಗಳು ಆಯಾಯ ಧರ್ಮದ ಜನರು ಹೇಗೆ ಜೀವನ ಸಾಗಿಸಬೇಕು ಎಂದು ತಿಳಿಸಿದರೆ, ಭಾರತ ಸಂವಿಧಾನವು ಎಲ್ಲಾ ಧರ್ಮೀಯರು ಯಾವ ರೀತಿ ಅತ್ಯುತ್ತಮ ಜೀವನ ನಡೆಸಬೇಕು ಎಂಬುದನ್ನು ತಿಳಿಸುತ್ತದೆ.  ಸಂವಿಧಾನವನ್ನು ಬೆರಳಚ್ಚು ಅಥವಾ ಮುದ್ರಣ ಮಾಡದೇ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಕೈ ಬರಹದ ರೂಪದಲ್ಲಿದೆ. ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷವಾಗಿ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಅದನ್ನು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
ಸಂವಿಧಾನವು 448 ವಿಧಿಗಳು 25 ಭಾಗಗಳು, 12 ಷೆಡ್ಯೂಲ್ 05 ಅನುಬಂಧಗಳು ಹಾಗೂ 98 ತಿದ್ದುಪಡಿಗಳನ್ನು ಒಳಗೊಂಡಿದೆ. ಶ್ರೇಷ್ಠ ಸಂವಿಧಾನ ಹೊಂದಿರುವ ನಾವೆಲ್ಲರೂ ಧನ್ಯತಾ ಭಾವದಿಂದ ಸಂವಿಧಾನದ ಮೂಲ ಆಶಯಗಳಿಗೆ ಅನುಗುಣವಾಗಿ ನಮ್ಮ ಬದುಕನ್ನು ಆದರ್ಶವಾಗಿರಿಸಿಕೊಂಡು ದೇಶದ ಉನ್ನತಿಗೆ ಶ್ರಮಿಸಬೇಕು ಎಂದು ಹೇಳಿದರು.
ಇಂದಿನ ಯುವಜನತೆಗೆ ನಮ್ಮ ಸಂವಿಧಾನದ ಶ್ರೇಷ್ಠತೆ ಮತ್ತು ಉದಾತ್ತತೆ ಕುರಿತು ಅರಿವು ಮೂಡಿಸಿ ದೇಶದ ಬಗ್ಗೆ ಭಕ್ತಿ ಹಾಗೂ ಗೌರವಗಳನ್ನು ಬೆಳೆಸಬೇಕಿದೆ. “ದೇಶ ಮೊದಲು” ಎಂಬ ಮನೋಭಾವನೆಯು ಪ್ರತಿಯೊಬ್ಬರಲ್ಲೂ ಜಾಗೃತಗೊಂಡು ದೇಶಕ್ಕಾಗಿ ಕೈಲಾದ ಮಟ್ಟಿಗೆ ಒಳ್ಳೆಯದನ್ನು ಮಾಡಬೇಕು ಎಂದರು.
ವಿಧಾನಸೌಧದÀ ಸಂದೇಶವು ಸಾರ್ವಜನಿಕರಿಗೆ ತಲುಪುವುದರಿಂದ ವಿಧಾನಮಂಡಲದ ಅಧಿಕಾರಿಗಳು-ನೌಕರರು ಸಾಮಾನ್ಯ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರೆ ಸಂವಿಧಾನ ದಿನದ ಆಚರಣೆಯು ಸಾರ್ಥಕವಾಗುತ್ತದೆ ಎಂದರು.
ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ಈ ಹಿಂದೆ ಸಂವಿಧಾನ ರಚನಾ ದಿನವನ್ನು “ರಾಷ್ಟ್ರೀಯ ಕಾನೂನು ದಿವಸ” ಎಂದು ಆಚರಿಸಲಾಗುತ್ತಿತ್ತು. ಕಳೆದ 2015ರ ಅಕ್ಟೋಬರ್ 11 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕಕ್ಕೆ ಮುಂಬೈನಲ್ಲಿ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 26 ರಂದು ಪ್ರತಿ ವರ್ಷ ಸಂವಿಧಾನ ದಿವಸವನ್ನಾಗಿ ಆಚರಿಸಲು ಘೋಷಣೆ ಮಾಡಿದರು. ಈ ಹಿನ್ನೆಲೆಯಲ್ಲಿ ನಾಡಿನ ಉದ್ದಗಲಕ್ಕೂ  ಇದರ ಆಚರಣೆ ಮಾಡುತ್ತಿದ್ದು, ಜನರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಡಾ:ಬಿ.ಆರ್.ಅಂಬೇಡ್ಕರ್ ಅವರು ಸುದೀರ್ಘ ಕಾಲ ಚರ್ಚಿಸಿ, ಅಭಿಪ್ರಾಯಗಳನ್ನು ಸಂಗ್ರಹಿಸಿ, ಅವರ ಬಾಲ್ಯದ ಅನುಭವಗಳಿಂದ ಜಗತ್ತು ಮೆಚ್ಚುವಂತೆ ಅತ್ಯಂತ ಶ್ರೇಷ್ಠ ಸಂವಿಧಾನ ರಚನೆ ಮಾಡಿದ್ದಾರೆ. ಶಾಸಕಾಂಗದವರು ಸಂವಿಧಾನದ ಅನುಷ್ಠಾನ ಮತ್ತು ಪರಿಣಾಮದ ಆತ್ಮಾವಲೋಕನ ಮಾಡಿಕೊಂಡು ಜನರ ಹಿತಕ್ಕಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ಸಂವಿಧಾನದ ಆಶಯವನ್ನು ಈಡೇರಿಸಬೇಕು ಎಂದರು.

ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ನೆನಪು ಹಚ್ಚ ಹಸಿರಾಗಿರಬೇಕು. ನಮಗೆ ಸ್ವಾತಂತ್ರ್ಯ ಸರಳವಾಗಿ ಸಿಕ್ಕಿಲ್ಲ, ಅನೇಕ ಹಿರಿಯರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ದೊರೆತಿದ್ದು, ಅವರ ಕೊಡುಗೆಯನ್ನು ಸ್ಮರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಸಂವಿಧಾನ ಪ್ರಸ್ತಾವನೆಯನ್ನು  ವಾಚಿಸಿದರು.
ಗೃಹಸಚಿವ ಆರಗ ಜ್ಞಾನೇಂದ್ರ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಜ್ಯದ ವಿಧಾನಸಭೆಯಲ್ಲಿ ಸಂವಿಧಾನ ಕುರಿತು ಚರ್ಚಿಸಿದ ಸಂದರ್ಭದಲ್ಲಿ  ಶಾಸಕಾಂಗದಲ್ಲಿ ಕೆಲಸ ಮಾಡುವವರಿಗೆ ಸಂವಿಧಾನದ ಬಗ್ಗೆ ಪರಿಕಲ್ಪನೆ ಇರಬೇಕು ಎಂಬುದರ ಬಗ್ಗೆ ಅರಿವು ಮೂಡಿಸಿದುದು ಸ್ಮರಣೀಯ. ಇದಕ್ಕಾಗಿ ಸಭಾಪತಿ ಮತ್ತು ಸಭಾಧ್ಯಕ್ಷರಿಗೆ  ಎಲ್ಲರೂ ಅಭಿನಂದನೆ ಸಲ್ಲಿಸಬೇಕು.  ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಸಾರ್ವತ್ರಿಕವಾಗಿ ಸಂವಿಧಾನ ದಿನ ಆಚರಿಸಲಾಗುತ್ತಿದೆ ಎಂದರು.
ನಿವೃತ್ತ ನ್ಯಾಯಮೂರ್ತಿಗಳಾದ ಸುಭಾಷ್ ಆಡಿ ಅವರು ಮಾತನಾಡಿ, ಸಂವಿಧಾನದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಪ್ರಮುಖ ಅಂಗಗಳಾಗಿವೆ. ತಪ್ಪು ಮಾಡಿದಾಗ ಎಚ್ಚರಿಸುವ ಕೆಲಸವನ್ನು ಪತ್ರಿಕಾ ರಂಗವು ನಾಲ್ಕನೇ ರಂಗವಾಗಿಮಾಡುತ್ತಿದೆ. ಪ್ರತಿಯೊಬ್ಬ ನಾಗರೀಕರು ಅದರಲ್ಲೂ ಮುಖ್ಯವಾಗಿ ಸರ್ಕಾರಿ ಕೆಲಸ ಮಾಡುವ ಅಧಿಕಾರಿಗಳು ಮೂಲಭೂತ ಹಕ್ಕು ಮತ್ತು ಜನಪರ ಕಾರ್ಯಗಳನ್ನು  ಜನಸಾಮಾನ್ಯರಿಗೆ ತಲುಪುವಂತೆÉ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಮತ್ತು ವಿಧಾನ ಪರಿಷತ್ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀಮತಿ ಕೆ.ಎಂ.ವಿಶಾಲಾಕ್ಷಿ ಸ್ವಾಗತಿಸಿದರು. ವಿಧಾನ ಪರಿಷತ್ ಸಚಿವಾಲಯದ ಕಾರ್ಯದರ್ಶಿಗಳಾದ ಕೆ.ಆರ್. ಮಹಾಲಕ್ಷ್ಮಿ ಅವರು ವಂದಿಸಿದರು.
Tags

Post a Comment

0Comments

Post a Comment (0)