ರಾಜ್ಯದಲ್ಲಿ ಒಟ್ಟು 1832 ವಿಶೇಷ ಮತಗಟ್ಟೆಗಳು – ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ

varthajala
0

 ಬೆಂಗಳೂರು, ಏಪ್ರಿಲ್ 24 (ಕರ್ನಾಟಕ ವಾರ್ತೆ): ಪ್ರಸ್ತುತ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಒಟ್ಟು ಎರಡು ಹಂತದಲ್ಲಿ ನಡೆಯಲಿದ್ದು, ಏಪ್ರಿಲ್ 26 ರಂದು ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳು ಹಾಗೂ ಮೇ 7 ರಂದು ಎರಡನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 5.47 ಕೋಟಿ ಮತದಾರರು ಹಾಗೂ ಅವರಿಗಾಗಿ ಒಟ್ಟು 58,834 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 1832 ವಿವಿಧ ವಿಷಯವಾರು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ತಿಳಿಸಿದರು.

ಅವರು ಇಂದು ಮುಖ್ಯಚುನಾವಣಾಧಿಕಾರಿಗಳ ನೂತನ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲಿ ಸಹ ಭಾರತ ಚುನಾವಣಾ ಆಯೋಗ ವಿಶೇಷ ಘೋಷ ವಾಕ್ಯ ಹಾಗೂ ಲೋಗೋವನ್ನು ಘೋಷಣೆ ಮಾಡುತ್ತದೆ. ಅದೇ ರೀತಿ ಈ ಚುನಾವಣೆಗಾಗಿ "ಚುನಾವಣಾ ಪರ್ವ - ದೇಶದ ಗರ್ವ" ಎನ್ನುವ ಘೋಷ ವಾಕ್ಯವನ್ನು ಅಳವಡಿಸಕೊಳ್ಳಲಾಗಿದ್ದು, ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಎಲ್ಲರನ್ನೂ ಒಳಗೊಳ್ಳುವ, ಸುಗಮ, ನೈತಿಕ, ಭಾಗವಹಿಸುವಿಕೆಯ ಜೊತೆಗೆ ಮಾಹಿತಿಯುಕ್ತ ಚುನಾವಣೆಯನ್ನು ರಾಜ್ಯದಾದ್ಯಂತ ಪ್ರಜಾಪ್ರಭುತ್ವದ ಹಬ್ಬದ ರೀತಿ ಆಚರಿಸಲಾಗುವುದು ಎಂದು ತಿಳಿಸಿದರು.


SVEEP (Systematic Voters Education Electoral Participation)   ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ ಅಡಿಯಲ್ಲಿ ಎಲ್ಲಾ ಮತದಾರರಲ್ಲಿ ಮತದಾನದ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲು SVEEP Interventions   ನಲ್ಲಿ ಮುಖ್ಯವಾಗಿ ಮಹಿಳಾ ಮತದಾರರು, ಯುವ ಮತದಾರರು, ವಿಶೇಷ ಚೇತನರು, ಆದಿವಾಸಿ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮುಖಾಂತರ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ  ಸ್ವೀಪ್ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.

ಮಹಿಳಾ ಮತದಾರರನ್ನು ಮತದಾನದಲ್ಲಿ ಭಾಗವಹಿಸುವಂತೆ ಉತ್ತೇಜಿಸುವ ಸಲುವಾಗಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಟ 05 ಸಖಿ ಮತಗಟ್ಟೆಗಳನ್ನು ರಾಜ್ಯಾದ್ಯಂತ ಒಟ್ಟು 1120 ಮತಗಟ್ಟೆಗಳನ್ನು ಮಹಿಳೆಯರಿಂದಲೇ ನಿರ್ವಹಿಸಲಾಗುತ್ತದೆ. ಈ ಮತಗಟ್ಟೆಗಲ್ಲಿ ಆರಕ್ಷಕ ಸಿಬ್ಬಂದಿ, ಗ್ರೂಪ್ ಡಿ ನೌಕರರು ಹಾಗೂ ಎಲ್ಲಾ ಮತಗಟ್ಟೆಯ ಅಧಿಕಾರಿಗಳು ಮಹಿಳೆಯರೇ ಆಗಿರುತ್ತಾರೆ. ವಿಶೇಷ ಚೇತನ ಮತದಾರರಲ್ಲಿ ಚುನಾವಣೆ ಮತ್ತು ಮತದಾನದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಭಾಗವಹಿಸುವಂತೆ ಪ್ರೇರೇಪಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಟ 01 ವಿಶೇಷ ಚೇತನ ಮತಗಟ್ಟೆಯನ್ನು ರಾಜ್ಯಾದ್ಯಂತ ಒಟ್ಟು 224 ಮತಗಟ್ಟೆಗಳನ್ನು ವಿಶೇಷ ಚೇತನ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ನಿರ್ವಹಿಸಲಾಗುತ್ತದೆ.
ಯುವ ಮತದಾರರಲ್ಲಿ ಚುನಾವಣೆ ಮತ್ತು ಮತದಾನದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಭಾಗವಹಿಸುವಂತೆ ಪ್ರೇರೇಪಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಟ 01 ಯುವ ಮತಗಟ್ಟೆಯನ್ನು ರಾಜ್ಯಾದ್ಯಂತ ಒಟ್ಟು 224 ಮತಗಟ್ಟೆಗಳನ್ನು ಯುವ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದರು.
ಎಲ್ಲಾ ಮತದಾರರಲ್ಲಿ ಚುನಾವಣೆ ಮತ್ತು ಮತದಾನದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಭಾಗವಹಿಸುವಂತೆ ಪ್ರೇರೇಪಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 01  ಧ್ಯೇಯ ಆಧಾರಿತ ಮತಗಟ್ಟೆಯನ್ನು ರಾಜ್ಯಾದ್ಯಂತ ಒಟ್ಟು 224 ಮತಗಟ್ಟೆಗಳನ್ನು ಆಯಾ ಜಿಲ್ಲೆಗಳ ವಿಶೇಷತೆ, ಪ್ರಾದೇಶಿಕ ಸಾಂಸ್ಕøತಿಕ ಸೊಗಡಿನ ಹಿನ್ನೆಲೆಯಲ್ಲಿ, ಪಾರಂಪರಿಕ ಕುಶಲ ಕಲೆಗಳು, ವಿನೂತನ ಪ್ರಯೋಗಗಳು, ಜಾಗತಿಕ ಸಂದೇಶ ಸಾರುವಂತಹ ಮಾದರಿಯಲ್ಲಿ ರಚಿಸಲು ನಿರ್ದೇಶಿಸಲಾಗಿದೆ.
ಆದಿವಾಸಿಗಳ ಮತಗಟ್ಟೆಗಳನ್ನು ಕಾಡಿನ ಅಂಚಿನಲ್ಲಿರುವ ಅಥವಾ ಕಾಡಿನಲ್ಲಿ ಜೀವಿಸುವ ಆದಿವಾಸಿ ಜನರಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಒಟ್ಟು 40 ಮತಗಟ್ಟೆಗಳನ್ನು ಸಾಂಪ್ರದಾಯಿಕ ಬುಡಕಟ್ಟು ಜನರ ಸಾಂಸ್ಕøತಿಕ ಹಿನ್ನೆಲೆ ಬಿಂಬಿಸುವ ರೀತಿಯಲ್ಲಿ ಅಲಂಕರಿಸುವ ಮೂಲಕ ಆದಿವಾಸಿ ಮತದಾರರನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆಕರ್ಷಿತರನ್ನಾಗಿ ಮಾಡಲು ಈ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಮುಖ್ಯ ಚುನಾವಣಾಧಿಕಾರಿಯವರ ಕಛೇರಿಯು ಎಲ್ಲಾ ವರ್ಗದ ಮತದಾರರನ್ನು ಒಳಗೊಂಡಂತೆ ಮತದಾನ ಪ್ರಕ್ರಿಯೆಯಲ್ಲಿ ಸುಗಮವಾಗಿ ಭಾಗವಹಿಸುವಂತೆ ಮಾಡಲು "ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು, ಪ್ರತಿ ಮತವೂ ಅಮೂಲ್ಯವಾದುದು" ಎಂಬ ಧ್ಯೇಯವನ್ನು ಹೊಂದಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಆರ್. ವೆಂಕಟೇಶ್ ಕುಮಾರ್ ಹಾಗೂ ಕೂರ್ಮರಾವ್ ಎಮ್ ಅವರು ಉಪಸ್ಥಿತರಿದ್ದರು.

Post a Comment

0Comments

Post a Comment (0)