ಮಂಡ್ಯ: ಟ್ರಾಫಿಕ್ ಪೊಲೀಸರ ದುರ್ವರ್ತನೆಯಿಂದಾಗಿ ಸಾವನ್ನಪ್ಪಿದ ಹೃತಿಕ್ಷಾ(3) ತಂದೆ ಅಶೋಕ್ ಸಚಿವ ಚೆಲುವರಾಯ ಸ್ವಾಮಿ ನೀಡಿದ ಪರಿಹಾರದ ಹಣವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ, ನನಗೆ ಹಣ ಬೇಡ,ನಿಮ್ಮ ಹಣ ನೀವೇ ಇಟ್ಟುಕೊಳ್ಳಿ ಅದರೆ ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ತಂದೆ ಅಶೋಕ್ ಸಚಿವರ ಬಳಿ ದುಃಖ ತೋಡಿಕೊಂಡಿದ್ದಾರೆ,
ಸೋಮವಾರ ಮದ್ದೂರಿನ ಬಳಿ ಮಗುವಿಗೆ ನಾಯಿ ಕಚ್ಚಿದೆ ಎಂದು ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿತ್ತು, ಈ ವೇಳೆ ಪೊಲೀಸರು ಅಡ್ಡಗಟ್ಟಿದ ಕಾರಣ ಬೈಕ್ ನಿಂದ ಬಿದ್ದಿದ್ದ ಅಶೋಕ್ ರ ಮೂರು ವರ್ಷದ ಮಗು ಸ್ಧಳದಲ್ಲಿಯೇ ಸಾವನ್ನಪ್ಪಿತ್ತು, ಈ ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು,
ಇಂದು ಉಸ್ತುವಾರಿ ಸಚಿವ ಚೆಲುವರಾಯ ಸ್ವಾಮಿ ಅಶೋಕ್ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು, ಈ ವೇಳೆ ಪರಿಹಾರ ಕೊಡಲು ಮುಂದಾದಾಗ ಅದನ್ನು ನಿರಾಕರಿಸಿದ ಅಶೋಕ್ ಹಣದಿಂದ ನನಗೆ ಆಗಬೇಕಾದ್ದೇನೂ ಇಲ್ಲ, ಮಗುವನ್ನು ವಾಪಸ್ ಕೊಡಲು ಯಾರಿಗಾದರೂ ಸಾಧ್ಯವೇ ಎಂದು ಕಣ್ಣೀರು ಸುರಿಸಿದ್ದಾರೆ,