ಖಾದಿ ಕೇವಲ ವಸ್ತ್ರವಲ್ಲ; ದೇಶದ ಹೆಮ್ಮಯ ಸಂಕೇತ; ಬೆಳಗಾವಿಯ ಸುವರ್ಣಸೌಧ ಅಂಗಳದಲ್ಲಿ ಖಾದಿ ರಾಷ್ಟ್ರ ಧ್ವಜದ ಅನಾವರಣ

varthajala
0


ಬೆಳಗಾವಿ, ಸುವರ್ಣಸೌಧ / ಬೆಂಗಳೂರು, ಡಿಸೆಂಬರ್ 09 (ಕರ್ನಾಟಕ ವಾರ್ತೆ): ಬೆಳಗಾವಿ ಸುವರ್ಣಸೌಧದ ಪಶ್ವಿಮ ದ್ವಾರದಲ್ಲಿ ರಾಷ್ಟ್ರದ ಎರಡನೇ ಅತಿ ದೊಡ್ಡ ಖಾದಿ ರಾಷ್ಟ್ರ ಧ್ವಜವನ್ನು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಇಂದು ಚರಕ ತಿರುಗಿಸುವ ಮೂಲಕ ಅನಾವರಣಗೊಳಿಸಿದರು. ಇದೆ ವೇಳೆ, ರಾಷ್ಟ್ರಗೀತೆ ಮೊಳಗಿತು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಬೆಳಗಾವಿ ಕಾಂಗ್ರೇಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ನೆನಪಾರ್ಥ ಇತ್ತೀಚೆಗೆ ನಡೆದ ಗಾಂಧೀ ಭಾರತ ಎನ್ನುವ ರಾಷ್ಟ್ರ ಪ್ರೇಮದ ಅದ್ಭುತ ಕಾರ್ಯಕ್ರಮ ನಡೆದ ಬೆನ್ನಲ್ಲೇ ಮತ್ತೊಂದು ಮಹತ್ವದ ರಾಷ್ಟ್ರಪ್ರೇಮದ ಕಾರ್ಯಕ್ರಮ ಗಂಡುಮೆಟ್ಟಿನ ನಾಡು ಬೆಳಗಾವಿಯಲ್ಲಿ ನೆರವೇರುತ್ತಿದ್ದಂತೆ ಸೇರಿದ್ಧ ಜನಸ್ತೋಮದಿಂದ ಕರತಾಡನ ಕೇಳಿ ಬಂದಿತು.
75 ಅಡಿ ಉದ್ದ ಹಾಗೂ 55 ಅಡಿ ಅಗಲದ ವಿಶಾಲ ದ್ವಜವು ದೇಶಪ್ರೇಮದ ಸಂಕೇತವಾಗಿದ್ದು, ನೋಡುಗರಲ್ಲಿ ದೇಶಭಕ್ತಿಯ ಸುಂದರ ಭಾವನೆಗಳನ್ನು ಬಿತ್ತಲಿದೆ. ಇಂತಹ ಮಹತ್ವದ ಧ್ವಜದ ನಿರ್ಮಾಣಕ್ಕೆ ಶ್ರಮಿಸಿದ ವಿನೋದಕುಮಾರ ರೇವಪ್ಪ ಬಮ್ಮಣ್ಣವರ ಅವರಿಗೆ ಮುಖ್ಯಮಂತ್ರಿಗಳು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮುಖ್ಯಮಂತ್ರಿಗಳು ಮಾತನಾಡಿ, ವಿಧಾನಸಭೆಯ ಭವ್ಯ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೆ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣಕ್ಕೆ ಶ್ರಮಿಸಿ ಉತ್ತಮ ಕಾರ್ಯ ಮಾಡಿದ ಸಭಾಧ್ಯಕ್ಷರಾದ  ಯು.ಟಿ.ಖಾದರ್ ಮತ್ತು ಅವರ ತಂಡದವರಿಗೆ ಮತ್ತು ಈ ಧ್ವಜ ನೇಯ್ಗೆಗೆ ಶ್ರಮಿಸಿದ ಕಲಬುರಗಿ ಜಿಲ್ಲೆಯ ಕಮಲಾಪುರದ ವಿನೋದಕುಮಾರ ರೇವಪ್ಪ ಬೊಮ್ಮಣ್ಣವರ ಅವರಿಗೆ ಸರ್ಕಾರದಿಂದ ಅಭಿನಂದನೆ ಸಲ್ಲಿಸಿ,  ಖಾದಿಯು ಕೇವಲ ವಸ್ತ್ರ ಅಲ್ಲ - ಅದು ದೇಶದ ಹೆಮ್ಮಯ ಸಂಕೇತ ಎಂದರು.


ನಾವೆಲ್ಲರೂ ಜಾತ್ಯಾತೀತರಾಗುವುದು ಈಗ ಅತೀ ಅವಶ್ಯವಿದೆ. ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕು. ನಾವು ಭಾತೃತ್ವವನ್ನು ಸಾಧಿಸಿದ್ದೇವೆ. ನಾವು ದೇಶಪ್ರೇಮ ಬೆಳೆಸಿಕೊಳ್ಳದೇ ಹೋದರೆ ಮನುಷ್ಯರಾಗಿ ಬಾಳಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿ ಯುವಜನರಲ್ಲಿ ದೇಶಭಕ್ತಿಯ ಭಾವ ಬೆಳೆಸುವ ಕಾರ್ಯವಾಗಬೇಕು ಎಂದರು.

ಪ್ರತಿಯೊಬ್ಬರಿಗೂ ಸಂವಿಧಾನದ ಮಹತ್ವ ತಿಳಿಸಲು ಎಲ್ಲಾ ಕಡೆ ಸಂವಿಧಾನ ಪೀಠಿಕೆ ಬೋಧಿಸುವ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ಅವರು ಮಾತನಾಡಿ, ಈ ತ್ರಿವರ್ಣ ಧ್ವಜದಿಂದಾಗಿ ಜನತೆಗೆ ರಾಷ್ಟ್ರ ಭಕ್ತಿ ಮೂಡಲಿದೆ. ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ರವಾನೆಯಾಗಲಿದೆ. ಇದಕ್ಕೆ ಶ್ರಮಿಸಿದ ಸಭಾಧ್ಯಕ್ಷರಾದ ಯು ಟಿ ಖಾದರ್, ರುದ್ರಪ್ಪ ಲಮಾಣಿ ಹಾಗೂ ಅವರ ತಂಡದವರಿಗೆ ಅಭಿನಂದನೆಗಳನ್ನು ತಿಳಿಸುವೆ ಎಂದರು. ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.

ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಮಾತನಾಡಿ, ಗಾಂಧೀ ಭೇಟಿ ನೀಡಿದ ನೆಲವಾದ ಬೆಳಗಾವಿಯಲ್ಲಿ ಎರಡನೇ ಅತಿ ದೊಡ್ಡ ರಾಷ್ಟ್ರಧ್ವಜದ ಅನಾವರಣ ನಡೆದಿದ್ದು ಸಂತಸ ತಂದಿದೆ. ಇದರ ಹಿಂದಿನ ಶ್ರಮ, ಬದ್ಧತೆ ಹಾಗೂ ಧ್ವಜದ ಮೇಲಿನ ಪ್ರೇಮ ಶ್ಲಾಘನೀಯವಾದುದು ಎಂದರು.

ಇದು ಕೇವಲ ಧ್ವಜವಲ್ಲ; ರಾಷ್ಟ್ರ ಭಕ್ತಿ, ರಾಷ್ಟ್ರಪ್ರೇಮದ ಸಂಕೇತ ಎಂದು ಸಚಿವರಾದ ಎಚ್ ಕೆ ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಸಚಿವರಾದ  ಡಾ. ಹೆಚ್.ಸಿ.ಮಹಾದೇವಪ್ಪ, ಲಕ್ಷ್ಮಿ ಹೆಬ್ಬಾಳಕರ, ಸಲೀಂ ಅಹ್ಮದ್, ಅಶೋಕ ಪಟ್ಟಣ, ನಸೀರ್ ಅಹ್ಮದ್, ರೇವಣ್ಣ, ತಮ್ಮಯ್ಯ, ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಇತರರು ಇದ್ದರು. ಲಾವಣ್ಯ ಆರ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

Post a Comment

0Comments

Post a Comment (0)