ಕಾಳಿದಾಸನ ಮೇಘದೂತ ಪ್ರಕೃತಿ ಹಾಗೂ ಶುದ್ಧ ಪ್ರೀತಿಯ ಅದ್ಭುತ ಕಾವ್ಯವಾಗಿದ್ದು, ವಿದ್ಯಾರ್ಥಿಗಳು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರೊ. ನಾರಾಯಣಘಟ್ಟ ಹೇಳಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಶ್ರೀಮತಿ ಗಂಗಮ್ಮ–ಶ್ರೀ ತಿಮ್ಮಯ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಚಕೋರ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು “ಮೇಘದೂತ – ಭಾವ ನವೀನ ವಿನ್ಯಾಸ” ವಿಷಯದ ಕುರಿತು ಮಾತನಾಡಿದರು.
ಮೇಘದೂತ, ಶಾಕುಂತಲ, ಕುಮಾರಸಂಭವ ಸೇರಿದಂತೆ ಕಾಳಿದಾಸನ ಕಾವ್ಯಗಳು ಮಾನವನ ಶುದ್ಧ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಪ್ರಕೃತಿ ಹಾಗೂ ಮಹಿಳೆಯ ವರ್ಣನೆಯಲ್ಲಿ ಕಾಳಿದಾಸನಿಗೆ ಸಮನಾದ ಕವಿ ಇನ್ನೂ ಜನಿಸಿಲ್ಲ. ಇಂತಹ ಕಾವ್ಯಗಳು ಮನಸ್ಸಿನ ಕಲ್ಮಶ ದೂರ ಮಾಡಿ ಏಕಾಗ್ರತೆಯನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.
ಮೊಬೈಲ್ ಮೀರಿಸಿ ಕಾವ್ಯದತ್ತ ಗಮನ ಹರಿಸಿ – ವಿದ್ಯಾರ್ಥಿಗಳಿಗೆ ಕರೆ
ವಿದ್ಯಾರ್ಥಿಗಳು ಯಾವುದೇ ಭಾಷೆ ಕಲಿಯಬಹುದು, ಆದರೆ ಮಾತೃಭಾಷೆಯ ಮಹತ್ವವನ್ನು ಮರೆಯಬಾರದು. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ದೇಶ ಬಲವಾಗುತ್ತದೆ ಎಂದು ಹೇಳಿದರು. ಜೊತೆಗೆ ಮೊಬೈಲ್ ಬಳಕೆ ಮತ್ತು ಮಾದಕ ವಸ್ತುಗಳಿಂದ ದೂರವಿದ್ದು ವಿದ್ಯಾಭ್ಯಾಸ ಹಾಗೂ ಸಾಹಿತ್ಯದತ್ತ ಗಮನ ಹರಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಮುಖ್ಯ ಆಡಳಿತ ಅಧಿಕಾರಿ ಡಾ. ಬಿ.ಜಿ. ಸತ್ಯಪ್ರಸಾದ್ ವಹಿಸಿಕೊಂಡಿದ್ದರು. ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಾಲೇಜಿನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.ಬೆಂಗಳೂರು ನಗರ ಉತ್ತರ ಚಕೋರ ಸಂಚಾಲಕರಾದ ಶ್ರೀ ಲಕ್ಷ್ಮಿ ಶ್ರೀನಿವಾಸ್ ಮಾತನಾಡಿ, ಚಕೋರ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾನವರ್ಧನೆಗೆ ಹಾಗೂ ಮನೋವಿಕಾಸಕ್ಕೆ ಸಹಕಾರಿಯಾಗುತ್ತವೆ ಎಂದರು.
ಪ್ರಾಂಶುಪಾಲರಾದ ಪ್ರೊ. ಚಿಕ್ಕಲಿಂಗಯ್ಯ ಬಿ.ಜಿ. ಸ್ವಾಗತಿಸಿದರು. ಸಿಇಒ ಶ್ರೀ ಆರ್. ಪ್ರಮೋದ್, ಡಾ. ಅನುಸೂಯ ಬಿ.ಎಂ., ನಿವೃತ್ತ ನಿರ್ದೇಶಕಿ ಡಾ. ದೀಪಿಕಾ ಎಂ. ಮುಖ್ಯ ಅತಿಥಿಗಳಾಗಿದ್ದರು. ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.